ಚಿಕ್ಕಮಗಳೂರು: ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪರಂಪರೆಯನ್ನು ಯಥಾವತ್ತಾಗಿ ಪಾಲಿಸಬೇಕು, ಹೊಸ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಇಲ್ಲಿ ಶುಕ್ರವಾರ ಒತ್ತಾಯಿಸಿದರು.
ಸಂಘ ಪರಿವಾರದವರು ದತ್ತ ಜಯಂತಿ ನಿಮಿತ್ತ ಈ ಬಾರಿ ಸುಧರ್ಮ ಯಾತ್ರೆ ಎಂಬ ಹೊಸ ಆಚರಣೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಕಿಲೋ ಮೀಟರ್ ಕಲ್ಲು, ಮಾರ್ಗಫಲಕಗಳಲ್ಲಿ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಗಿರಿ ಎಂದ್ದಿದ್ದದನ್ನು ದತ್ತಪೀಠ ಎಂದು ಬದಲಾವಣೆ ಮಾಡಲಾಗಿದೆ. ಭಾವೈಕ್ಯ ಕೇಂದ್ರ ಬಾಬಾಬುಡನ್ಗಿರಿ ದರ್ಗಾವನ್ನು ಸಂಘಪರಿವಾರವು ಕೇಸರಿಕರಣ ಮಾಡಲು ಪ್ರಯತ್ನಿಸುತ್ತಿದೆ’ ಎಂದು ದೂಷಿಸಿದರು.
‘ಕಳೆದ ಬಾರಿ ದತ್ತ ಜಯಂತಿ ಸಂದರ್ಭದಲ್ಲಿ ಬಾಬಾಬುಡನ್ಗಿರಿಯಲ್ಲಿ ಗೋರಿಯನ್ನು ಹಾನಿ ಮಾಡಲಾಗಿತ್ತು. ಅಹಿತಕರ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಎಚ್ಚರಿಕೆ ವಹಿಸಬೇಕು’ ಎಂದು ಮನವಿ ಮಾಡಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಕೆ.ಹಸನಬ್ಬ, ಮುಖಂಡರಾದ ಯೂಸುಫ್ ಹಾಜಿ, ಗೌಸ್ ಮುನೀರ್, ಪುಟ್ಟಸ್ವಾಮಿ ಇದ್ದರು.