ಮುಂಬೈ: ‘ಭಾರತದಲ್ಲಿ ಹಗಲುಗನಸು ಕಾಣಲು ಯಾವುದೇ ರೀತಿಯ ನಿಷೇಧ ಇಲ್ಲ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿಯಾಗುವ ಇಂಗಿತವನ್ನು ಲೇವಡಿ ಮಾಡಿದ್ದಾರೆ.
‘ಈಗಾಗಲೇ 20 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಈ ವಾಸ್ತವ ಗೊತ್ತಿದ್ದರೂ ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ’ ಎಂದು ಅವರು ಕುಹಕವಾಡಿದ್ದಾರೆ.
‘ರಾಜಕೀಯ ಎಂದರೆ ಆಕರ್ಷಕ ಟ್ವೀಟ್ ಅಥವಾ ಭಾಷಣ ಮಾಡಿದಷ್ಟು ಸುಲಭವಲ್ಲ. ಅದರ ವ್ಯಾಪ್ತಿ ಅದಕ್ಕೂ ಮಿಗಿಲಾದದ್ದು’ ಎಂದು ಜಾವಡೇಕರ್ ಮಂಗಳವಾರ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಶ್ಲೇಷಿಸಿದ್ದಾರೆ.
‘ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಸಂವಿಧಾನಬದ್ಧವಾಗಿದೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.