ಕಡೂರು: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2021-22 ನೆ ಸಾಲಿನಲ್ಲಿ ₹ 30.86 ಲಕ್ಷ ನಿವ್ವಳ ಲಾಭ ದಾಖಲಿಸಿದೆ ಎಂದು ಅಧ್ಯಕ್ಷ ಎಚ್.ಎಂ.ರೇವಣ್ಣಯ್ಯ ತಿಳಿಸಿದರು.
ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಬ್ಯಾಂಕಿನ 80ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ ₹ 51.6 ಲಕ್ಷ ಸಾಲ ನೀಡಿದೆ. ತಗಾದೆ ಸಾಲ ₹ 79.34 ಕೋಟಿಯಲ್ಲಿ ₹ 34.7 ಕೋಟಿ ವಸೂಲಾಗಿದ್ದು, ಶೇ 43.83 ಪ್ರಗತಿಯಾಗಿದೆ. ₹ 44.56 ಲಕ್ಷ ರೈತರಿಂದ ಬಾಕಿ ಬರಬೇಕಿದೆ. ಶೇ 6, 4 ಮತ್ತು 3 ಬಡ್ಡಿ ನೀಡಿದ ಸಾಲಗಳಲ್ಲಿ ಸರ್ಕಾರವು ರಿಯಾಯಿತಿ ನೀಡಿ ಬ್ಯಾಂಕಿಗೆ ₹ 60.55 ಲಕ್ಷ ಜಮಾ ಮಾಡಿದೆ. ಸಂಸ್ಥೆಯು 7033 ಸದಸ್ಯರನ್ನು ಹೊಂದಿದೆ. 2026 ಸದಸ್ಯರಿಂದ ಒಟ್ಟು ವಿವಿಧ ಖಾತೆಗಳಿಂದ ₹ 58.6 ಕೋಟಿ ಸಂಗ್ರಹವಾಗಿದೆ.
ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರದಿಂದ ರೈತಸ್ನೇಹಿಯಾಗಿ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಸಾಲ ಸೌಲಭ್ಯ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಸಹಕಾರಿ ಶೆಟ್ಟಿಹಳ್ಳಿ ರಾಮಪ್ಪ ಮಾತನಾಡಿ, ‘80 ವರ್ಷಗಳ ಹಿಂದೆ ಆರಂಭವಾದ ಈ ಬ್ಯಾಂಕ್, ರೈತರಿಗೆ ಸಹಕಾರ ತತ್ವದಡಿ ಅತ್ಯುತ್ತಮ ಸೇವೆ ನೀಡುತ್ತಿದೆ. ಸಾಲ ಸೌಲಭ್ಯ ಪಡೆದವರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ, ಬ್ಯಾಂಕ್ ಮತ್ತಷ್ಟು ಹೆಚ್ಚಿನ ಸೇವೆ ಮಾಡುವಲ್ಲಿ ಸಹಕರಿಸಬೇಕಿದೆ’ ಎಂದರು.
ವ್ಯವಸ್ಥಾಪಕ ಹನುಮಂತರಾಯ 21-22ನೇ ಸಾಲಿನ ಆಯವ್ಯಯ ಮತ್ತು ಅಂದಾಜು ಆಯವ್ಯಯ ಮಂಡಿಸಿದರು. ಉಪಾಧ್ಯಕ್ಷ ತಿಮ್ಮೇಗೌಡ, ನಿರ್ದೇಶಕರಾದ ಕೆ.ಎಚ್.ರಂಗನಾಥ್, ಪುಷ್ಪಲತಾ ಸೋಮೇಶ್, ರೇಣುಕಮ್ಮ, ಆರ್.ಶ್ರೀನಿವಾಸ್ ಮೂರ್ತಿ, ಬಿ.ಎಸ್.ಸೋಮಶೇಖರ್, ಕುಶಕುಮಾರ್, ವಿರೂಪಾಕ್ಷಪ್ಪ ಇದ್ದರು.