ಸುಮಾರು 5 ಎಕರೆ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲು ಬಿತ್ತನೆ ಬೀಜಕ್ಕಾಗಿಯೇ ರೈತರು
₹ 75 ಸಾವಿರದಿಂದ ₹1 ಲಕ್ಷ ಖರ್ಚು ಮಾಡಬೇಕು. ಅದರಲ್ಲೂ ಬಿತ್ತನೆ ಬೀಜಕ್ಕಾಗಿ ಪಂಜಾಬ್ ರಾಜ್ಯವನ್ನು ಅವಲಂಬಿಸಬೇಕು. ಅಲ್ಲಿಂದ ಸಿಗುವುದು ಬಿತ್ತನೆಗಾಗಿ ಇರುವ ಬೀಜದ ಆಲೂಗಡ್ಡೆಯಲ್ಲ. ದಪ್ಪ ಆಲೂಗೆಡ್ಡೆಯಲ್ಲಿರುವ ಕಣ್ಣುಗಳನ್ನು ಕತ್ತರಿಸಿ, ಅದನ್ನೇ ಇಲ್ಲಿ ಬಿತ್ತನೆ ಮಾಡುತ್ತಾರೆ. ಇದರಲ್ಲಿ ಎಲ್ಲವೂ ಮೊಳಕೆಯೊಡೆಯುತ್ತವೆ ಎಂಬ ಖಾತರಿಯಿಲ್ಲ. ಕಡೂರು ಭಾಗದ ಆಲೂಗಡ್ಡೆ ಬೆಳೆಗಾರರಿಗೆ ಬಿತ್ತನೆ ಬೀಜದ್ದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗಳತ್ತ ಗಮನ ಹರಿಸಿದ ಗಿಣೀಶ್ ಅವರಿಗೆ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದೊಂದಿಗೆ ‘ಅಂಗಾಂಶ ಕೃಷಿ‘ ಮೂಲಕ ಬಿತ್ತನೆ ಬೀಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಾರಿ ಕಂಡಿತು.