ಮಂಗಳೂರು: ಪಿಎಫ್ಐ, ಎಸ್ಡಿಪಿಐ, ಕೆಎಫ್ಡಿಯಂತಹ ಸಂಘಟನೆಗಳ ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಹಿಂದೂಗಳ ಕೊಲೆ ಮಾಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ದೊಡ್ಡ ನರಹಂತಕ ಬೇರಾರೂ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಜ್ಯದಲ್ಲಿ ಟಿಪ್ಪು ಸಂತತಿ, ಅಫ್ಜಲಖಾನ್ ಸಂತತಿ ಹೆಚ್ಚುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಕಾಶ್ಮೀರಿ ಪಂಡಿತರಿಗೆ ಆದ ಗತಿ ನಮಗೂ ಆಗಲಿದೆ ಎಂದರು. ನಗರದಲ್ಲಿ ನಡೆದ ಜನಸುರಕ್ಷಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರಪ್ರದೇಶದಲ್ಲಿ ಎನ್ ಕೌಂಟರ್ ನಡೆಯುತ್ತಿದ್ದು, ನ್ಯಾಯಾಲಯ ಜಾಮೀನು ನೀಡಿದರೂ ಜೈಲಿನಿಂದ ಹೊರಗೆ ಹೋಗಲು ಅಪರಾಧಿಗಳು ಹೆದರುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಪರಾಧಿಗಳು ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತ್ರಿಪುರಾ ವಿಧಾನಸಭೆ ಚುನಾವಣೆ ಫಲಿತಾಂಶ ಅಜ್ಜಿಯ ನೆನಪು ತರಿಸಿದೆ. ರಾಹುಲ್ ಗಾಂಧಿ ಕರ್ನಾಟಕಕ್ಕೂ ಬರಬೇಕು. ಅವರನ್ನು ಇಟಲಿಗೆ, ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುತ್ತೇವೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ:
ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕರ್ನಾಟಕ ರಾಜ್ಯ ಅಪರಾಧ, ಭ್ರಷ್ಟಾಚಾರದಲ್ಲಿ ನಂ 1 ಆಗಿದೆ ಎಂದರು.
ಜಾಹೀರಾತಿನಲ್ಲಿಯೇ ಅಭಿವೃದ್ಧಿಯ ಚಿತ್ರವನ್ನು ರಾಜ್ಯದ ಜನರಿಗೆ ತೋರಿಸಲಾಗುತ್ತಿದೆ. ರಾಜ್ಯ ಯಾವುದೇ ಅಭಿವೃದ್ಧಿ ಕಂಡಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆಯುವ ಸಂದರ್ಭ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ ಎಂದು ಹೇಳಿದರು.
ಡಾ. ಕಲಬುರ್ಗಿ, ಗೌರಿ ಲಂಕೇಶರ ಹತ್ಯೆಯಾಗಿದೆ. ಇದುವರೆಗೆ ಆರೋಪಿಗಳ ಬಂಧನ ಆಗಿಲ್ಲ. ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಶಾಸಕ ಸೋಮಶೇಖರ ಬೆಂಬಲಿಗರಿಂದ ಗೂಂಡಾ ಸಂಸ್ಕೃತಿ ಆರಂಭವಾಗಿದೆ ಎಂದು ಆರೋಪಿಸಿದರು.
ಬಿಜೆಪಿಗೆ ಜನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು, ಗೂಂಡಾ ಪ್ರವೃತ್ತಿ ಆರಂಭಿಸಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಕೆಲಸ ಆರಂಭವಾಗಿದೆ. ಕರ್ನಾಟಕದಲ್ಲಿಯೂ ಅದು ಮುಂದುವರಿಯಲಿದೆ ಎಂದು ತಿಳಿಸಿದರು.
ಗೂಂಡಾ ರಾಜ್ಯವನ್ನು ಕಿತ್ತೊಗೆಯಬೇಕಾಗಿದೆ. ಅದಕ್ಕೆ ರಾಜ್ಯದ ಜನರು ಈಗಾಗಲೇ ನಿರ್ಧರಿಸಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.