ಅಜ್ಜಂಪುರ: ‘ಗಾಳಿ, ನೀರು, ಬೆಳಕು ಪ್ರಕೃತಿಯ ಅಮೂಲ್ಯ ಕೊಡುಗೆ. ಅವುಗಳನ್ನು ಸಂರಕ್ಷಿಸಬೇಕು ಮತ್ತು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಾಣೇಹಳ್ಳಿ ತರಳುಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಮಂಗಳವಾರ ನಡೆದ ಕೆರೆ ಸಂಜೀವಿನಿ ಯೋಜನೆಯಡಿ ಪುನಶ್ಚೇತನಗೊಳಿಸಲಾದ ಬುಳ್ಳನಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಡಿ.ಎಸ್. ಸುರೇಶ್, ನೀರು ಸಂಗ್ರಹ, ಅಂತರ್ಜಲ ಹೆಚ್ಚಳಕ್ಕೆ ಕೆರೆ ಪುನಶ್ಚೇತನ ದಾರಿ ಮಾಡಿಕೊಡಲಿದೆ. ಇಂತಹ ಕಾರ್ಯವನ್ನು ಸರ್ಕಾರದ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರ್ಣ ಗೊಳಿಸಿರುವುದು ಉತ್ತಮ ಬೆಳವಣಿಗೆ’ ಎಂದರು.
ಬುಳ್ಳನ ಕೆರೆ ಬಳಕೆದಾರರ ಸಂಘ ಅಧ್ಯಕ್ಷ ಮಂಜುನಾಥ್, ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷೆ ತಿಪ್ಪಮ್ಮ ಯೋಗೀಶಪ್ಪ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್ ಹರ್ತಿ, ಪಿಡಿಒ ನವೀನ್, ಮುಖಂಡ ಕೆ.ಸಿ.ಶಿವಮೂರ್ತಿ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಸಿ.ಚಂದ್ರಪ್ಪ, ಪ್ರಗತಿ ಬಂಧು ಸ್ವ-ಸಹಾಯ ಸಂಘ ಒಕ್ಕೂಟ ಅಧ್ಯಕ್ಷೆ ಶೋಭಾ ಶಿವಕುಮಾರ್, ದಕ್ಷಿಣಾ ಮೂರ್ತಿ, ವಿಶ್ವನಾಥ್, ವಿರೂಪಾಕ್ಷಪ್ಪ, ಮಲ್ಲೇಶಪ್ಪ, ಕಾಂತಮ್ಮ, ಸಂಜೀವ ಗೌಡ, ಭರತ್, ಪ್ರಕಾಶ್ ರಾವ್, ಕುಸುಮಾಧರ್ ಮತ್ತಿತರರು ಇದ್ದರು.
ಕರ್ನಾಟಕ ಸರ್ಕಾರದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಚಿಕ್ಕಾನವಂಗಲ ಗ್ರಾಮದ ಬುಳ್ಳಯ್ಯನ ಕೆರೆ ಬಳಕೆದಾರರ ಸಂಘ, ಗ್ರಾಮ ಪಂಚಾಯಿತಿ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.