‘ನಮಗೆಂತಹ ಸಾಹಿತಿಗಳು ಬೇಕು?’ (ಸಂಗತ, ಮೇ 31) ಲೇಖನ ಸಕಾಲಿಕ. ಆದರೆ ವಾಸುದೇವಮೂರ್ತಿ ಅವರು ಆಶಿಸಿರುವಂತಹ ಸಾಹಿತಿಗಳನ್ನು ಹುಡುಕಿ ತರುವುದೆಲ್ಲಿಂದ? ಇರುವ ಸಾಹಿತಿಗಳೆಲ್ಲ ಎಡ–ಬಲ ಎಂದೋ, ಹಿಂದು–ಮುಂದು ಅಂತಲೋ ಹಂಚಿಹೋಗಿ ಜಡಗೊಂಡಿದ್ದಾರೆ. ಅಧಿಕಾರ, ಅಂತಸ್ತು, ಮಾನ, ಸನ್ಮಾನದ ಬೆನ್ನುಬಿದ್ದು ತಮ್ಮತನವನ್ನೇ ಕಳೆದುಕೊಂಡಿದ್ದಾರೆ. ವಿಭಿನ್ನ ವಿಚಾರಧಾರೆಗಳಿಗೆ ತೆರೆದುಕೊಳ್ಳದೆ ಇವರೇ ಅಸಹಿಷ್ಣುತೆಯ ಹರಿಕಾರರೆನಿಸಿಕೊಳ್ಳುತ್ತಿದ್ದಾರೆ. ಎಲ್ಲದರಿಂದಲೂ ಸಮದೂರದಲ್ಲಿ ನಿಂತು, ಯಾವುದೇ ವಿಚಾರದ ಬಗ್ಗೆ ವಸ್ತುನಿಷ್ಠವಾಗಿ ಆಲೋಚಿಸುವ, ವಿಶ್ಲೇಷಿಸುವ, ಪ್ರತಿಭಟಿಸುವ ಛಾತಿಯನ್ನೇ ಕಳೆದುಕೊಂಡಿದ್ದಾರೆ. ಪೂರ್ವಗ್ರಹಗಳು ಸಾಹಿತಿಗಳಲ್ಲೂ ಮನೆ ಮಾಡಿವೆ. ಎಂಥ ಸಾಮಾಜಿಕ, ರಾಜಕೀಯ ಅನಿಷ್ಟಗಳ ಬಗ್ಗೆಯೂ ಇವರು ಚಕಾರ ಎತ್ತುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಇವರ ನಡೆ- ನುಡಿ, ಬದುಕು– ಬರಹಗಳ ಮಧ್ಯೆ ಇರುವ ಅಂತರ ಮತ್ತು ಒಬ್ಬ ಸಾಹಿತಿಗೆ ಇರಬೇಕಾದ ಸೂಕ್ಷ್ಮತೆ ಇವರಲ್ಲಿ ಇಲ್ಲದಿರುವುದು. ಬರಹಕ್ಕಿಂತ ಬದುಕು ದೊಡ್ಡದು ಎಂದು ಅನಿಸದಿದ್ದರೆ ಹೀಗೆಲ್ಲ ಆಗುವುದೇ.