ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಗುಡುಗುಸಹಿತ ಹದ ಮಳೆಯಾಯಿತು.ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ತೇಗೂರಿನ ಮಂಜುನಾಥ್(48) ಮತ್ತು ಭಾರತಿ (42) ದಂಪತಿ ಮೃತಪಟ್ಟಿದ್ದಾರೆ.
ಜಮೀನಿನಲ್ಲಿಸಂಜೆ ತರಕಾರಿ ಕೀಳುವ ವೇಳೆ ಸಿಡಿಲು ಬಡಿದಿದೆ. ದಂಪತಿಗೆ ಪುತ್ರಿ ಪೂಜಾ, ಪುತ್ರ ದೀಪಕ್ ಇದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜನ ಜಮಾಯಿಸಿದ್ದಾರೆ. ಕುಟುಂಬದವರ ಆಕ್ರಂದನ ಹೇಳತೀರದಾಗಿದೆ.
ಮಧ್ಯಾಹ್ನ 3.30ರ ಹೊತ್ತಿಗೆ ವರ್ಷಧಾರೆ ಶುರುವಾಯಿತು. ಸ್ವಲ್ಪ ಹೊತ್ತಿನ ನಂತರ ಬಿರುಸಾಯಿತು. ಗುಡುಗುಮಿಂಚಿನ ಆರ್ಭಟ ಇತ್ತು. ಸುಮಾರು ಮುಕ್ಕಾಲು ಗಂಟೆ ಮಳೆ ಸುರಿಯಿತು. ಬಿಸಿಲ ತಾಪದಿಂದ ಕಾದಿದ್ದ ಇಳೆಗೆ ತಂಪೆರೆಯಿತು.
ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸಲು ನಗರದ ಐಜಿ ರಸ್ತೆ ಬದಿಯಲ್ಲಿ ಅಗೆದಿದ್ದು, ಈ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಕೆಲವೆಡೆ ಕೆಸರಿನ ರಾಡಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಅಲ್ಲಂಪುರ, ಕೈಮರ, ಮೂಗ್ತಿಹಳ್ಳಿ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಾಗಿದೆ. ಭರಣಿ ಮಳೆ ರೈತರಲ್ಲಿ ಕೊಂಚ ಸಂತಸ ಮೂಡಿಸಿದೆ.