ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ತಡರಾತ್ರಿಯಿಂದ ಬೆಳಗಿನಜಾವದವರೆಗೆ ಮಳೆ ಸುರಿದಿದೆ. ಮಾರುಕಟ್ಟೆಯಲ್ಲಿ ಮನೆಯೊಂದು ಕುಸಿದಿದೆ, ಮಧುವನ ಬಡಾವಣೆಯಲ್ಲಿ ಕೆಎಸ್ಒಯು ಪ್ರಾದೇಶಿಕ ಕೇಂದ್ರದ ದ್ವಾರದ ಬಳಿ ರಸ್ತೆ ಕುಸಿದಿದೆ.
ಕೆಂಪನಹಳ್ಳಿಯಲ್ಲಿ ಸಾಮಿಲ್ ಕಾಂಪೌಡು ಒಡೆದು ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ಎಂ.ಜಿ.ರಸ್ತೆಯಲ್ಲಿ ಕಾಂಪೌಂಡೊಂದು ಕುಸಿದಿದೆ.
ಅಮೃತ್ ಯೋಜನೆ ಕಾಮಗಾರಿ ನಗರದಲ್ಲಿ ವಿವಿಧೆಡೆ ರಸ್ತೆ ಬದಿ ಅಗೆದಿದ್ದು, ಗುಂಡಿಗಳಲ್ಲಿ ನೀರು ತುಂಬಿಕೊಂಡು ರಾಡಿಯಾಗಿದೆ. ವಿವಿಧ ಬಡಾವಣೆಗಳಲ್ಲಿ ಕೆಸರಿನ ರಾಡಿಯಾಗಿ ಸಂಚಾರಕ್ಕೆ ತೊಂದರೆಯಾಗಿದೆ. ರಾಮೇಶ್ವರ ನಗರದಲ್ಲಿ ಕೆಲವೆಡೆ ನೀರು ಜಮಾಯಿಸಿದೆ.
ಅಯ್ಯಪ್ಪನಗರ, ಟಿಪ್ಪು ನಗರ, ಸಂತೆ ಮೈದಾನ ಸಮೀಪ, 60ಅಡಿ ರಸ್ತೆ ಪಕ್ಕದ ಕಾಲುವೆಯಲ್ಲಿ ನೀರು ಆವರಿಸಿತ್ತು. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.