ರಾಷ್ಟ್ರೀಯ ಹೆದ್ದಾರಿ 173ರ ಗಂಗನಮಕ್ಕಿ ಬಳಿ ಹೆದ್ದಾರಿಯ ಬದಿಯಲ್ಲಿ ಒಳಚಂಡಿ ವ್ಯವಸ್ಥೆಯಿಲ್ಲದೇ, ಏರು ಪ್ರದೇಶದಿಂದ ಹರಿದು ಬರುವ ನೀರು ರಸ್ತೆ ಮೇಲೆ ನಿಂತು ಹೆದ್ದಾರಿ ಸವಾರರಿಗೆ ಅಡ್ಡಿ ಉಂಟಾಯಿತು. ಈ ಪ್ರದೇಶದ ಕೆಲಭಾಗ ಪಟ್ಟಣ ಪಂಚಾಯಿತಿಗೂ, ಮತ್ತಷ್ಟು ಭಾಗ ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದ್ದು, ಒಳಚರಂಡಿ ನಿರ್ಮಾಣವಾಗದೇ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ. ಮಳೆ ಚುರುಕುಗೊಂಡಿರುವುದರಿಂದ ಬತ್ತಿ ಹೋಗಿದ್ದ ಝರಿ, ತೊರೆಗಳಲ್ಲಿ ನೀರಿನ ಸೆಲೆ ಕಾಣತೊಡಗಿದ್ದು, ತತ್ಕೊಳ, ಭೈರಾಪುರ, ಚಿಕ್ಕಳ್ಳ, ಪಟ್ಟದೂರು ಮುಂತಾದ ಗ್ರಾಮಗಳಲ್ಲಿರುವ ಝರಿಗಳು ನೀರಿನಿಂದ ಕಂಗೊಳಿಸತೊಡಗಿವೆ.