ಕಡೂರು: ತಾಲ್ಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶಕುನರಂಗನಾಥಸ್ವಾಮಿ ರಥೋತ್ಸವ ಶುಕ್ರವಾರ ರಾತ್ರಿ ಸಹಸ್ರಾರು ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆಯಿಂದಲೇ ಭಕ್ತರು ದೇಗುಲಕ್ಕೆ ಬಂದಿದ್ದರು. ಮಧ್ಯಾಹ್ನ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಸಕಲ ಗೌರವದೊಂದಿಗೆ ಗ್ರಾಮದ ಬಿಡದಿ ಮನೆಗೆ ಸಂಪ್ರಾದಾಯಿಕವಾಗಿ ಬರ ಮಾಡಿಕೊಳ್ಳಲಾಯಿತು.
ಸಂಜೆ ಉಭಯ ನಾಚ್ಚಿಯಾರ್ (ಶ್ರೀದೇವಿ-ಭೂದೇವಿ) ಜೊತೆ ಶಕುನ ರಂಗನ ಕಲ್ಯಾಣೋತ್ಸವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಸಂಬಂಧಮಾಲೆ, ಮಾಂಗಲ್ಯಧಾರಣೆ ನಡೆದ ನಂತರ ಪತ್ನಿ ಸಮೇತ ರಂಗನಾಥನನ್ನು ಭಕ್ತರು ದರ್ಶಿಸಿ ಪುಳಕಗೊಂಡರು. ಇದೇ ಸಮಯದಲ್ಲಿ ವಾಡಿಕೆಯಂತೆ ಬಿಲ್ಗೋಡು ಸೇವೆ ಹಾಗೂ ಬಲಿಪ್ರಧಾನ (ಬಾಳೆಕಂದು) ನಡೆಸಲಾಯಿತು. ನಂತರ ಸರ್ವಾಲಂಕೃತ ರಥದಲ್ಲಿ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀದೇವಿ, ಭೂದೇವಿಯವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಬಲಿ ಪೂಜೆ ಸಲ್ಲಿಸಲಾಯಿತು.
ರಾತ್ರಿ 11.45 ಗಂಟೆಗೆ ಪ್ರಧಾನ ಅರ್ಚಕ ಕೃಷ್ಣ ಭಟ್ಟರು ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನಡೆಸಿದ ಮೇಲೆ ಭಕ್ತರು ರಥವನ್ನು ಸ್ವಲ್ಪ ದೂರ ಭಕ್ತಿಭಾವದಿಂದ ಎಳೆದ ನಂತರ ಸ್ವಾಮಿಯ ವಿಗ್ರಹವನ್ನು ಚಿಕ್ಕರಥಕ್ಕೆ ಸ್ಥಳಾಂತರಿಸಲಾಯಿತು. ನಂತರ ದೇಗುಲದ ತನಕ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರು ‘ಗೋವಿಂದಾ.. ಗೋವಿಂದಾ..’ ಎಂದು ನಾಮಸ್ಮರಣೆ ಮಾಡಿದರೆ, ಹಲವು ಭಕ್ತರು ರಥದ ಕಳಶಕ್ಕೆ ಬಾಳೆಹಣ್ಣು ಎಸೆದು ಸಂಭ್ರಮಿಸಿದರು.
ದಾಸಯ್ಯಗಳ ಶಂಖು, ಜಾಗಟೆಯ ಜೊತೆ ಗ್ರಾಮೀಣ ಸೊಗಡಿನ ಜಾನಪದ ವಾದ್ಯಗಳ ಜೊತೆ ಸಿಡಿ ಮದ್ದುಗಳ ಪ್ರದರ್ಶನ ಮುಗಿಲು ಮುಟ್ಟಿತ್ತು. ದೇವಸ್ಥಾನದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಕುನ ರಂಗನಾಥಸ್ವಾಮಿಯ ಮೂಲ ವಿಗ್ರಹಕ್ಕೆ ಸುವರ್ಣ ಕಿರೀಟದೊಂದಿಗೆ ವಿಶೇಷ ಅಲಂಕಾರ ಮನಸೆಳೆಯುತ್ತಿತ್ತು.
ಕಡೂರು ತಹಶಿಲ್ದಾರ್ ಉಮೇಶ್, ಗ್ರಾಮಲೆಕ್ಕಿಗ ಜಿತೇಂದ್ರಸಿಂಗ್, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜು ಮತ್ತು ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಮ್ಮ, ಮಾಜಿ ಅಧ್ಯಕ್ಷ ಎಸ್.ಆರ್. ಯೋಗೀಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲ ಮಲ್ಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಹಳೆಹಟ್ಟಿ ಆನಂದನಾಯ್ಕ ರಥೋತ್ಸವದಲ್ಲಿ ಭಾಗಿಯಾದರು. ಪಿಎಸ್ಐ ಮೌನೇಶ್ ಭದ್ರತೆಯ ಉಸ್ತುವಾರಿ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.