ಮೈಸೂರು: ‘ಯಾರು ಲೂಟಿ ಮಾಡಿದ್ದಾರೆ’ ಎಂದು ಸಾಬೀತುಪಡಿಸಲು ಚಾಮುಂಡಿಬೆಟ್ಟಕ್ಕೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ ಸೋಮವಾರ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾರಥ್ಯದ ಜನಾಶೀರ್ವಾದ ಯಾತ್ರೆ ವೇಳೆ ‘ಸಿ.ಟಿ.ರವಿ ಅಲ್ಲ; ಲೂಟಿ ರವಿ, ಕೋಟಿ ರವಿ’ ಎಂದು ಸಿದ್ದರಾಮಯ್ಯ ಹೇಳಿರುವುದನ್ನು ಟೀಕಿಸಿದರು. ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದರು.
‘ಸಿದ್ದರಾಮಯ್ಯ ನಿಜವಾದ ಹಿಂದೂ ಆಗಿದ್ದರೆ, ಬದ್ಧತೆ ಇದ್ದರೆ ಮಾರ್ಚ್ 26ರಂದು ಬೆಟ್ಟಕ್ಕೆ ಬರುವಂತೆ ಹೇಳಿದ್ದೆ. ನಾನು ಬಂದು ಪೂಜೆ ಸಲ್ಲಿಸಿದ್ದೇನೆ. ಅವರು ಬಂದಿಲ್ಲ. ಯಾರು ಲೂಟಿಕೋರರು ಎಂಬುದನ್ನು ಚಾಮುಂಡೇಶ್ವರಿಯೇ ನಿರ್ಧರಿಸಲಿ’ ಎಂದರು.
‘ಲೋಕಾಯುಕ್ತಕ್ಕೆ ಸಲ್ಲಿಸಿದ್ದಕ್ಕಿಂತ ಹೆಚ್ಚು ಆಸ್ತಿಯನ್ನು ನಾನು ಹೊಂದಿದ್ದರೆ ಮುಖ್ಯಮಂತ್ರಿ ತನಿಖೆ ನಡೆಸಲಿ. ಅದನ್ನು ಬಿಟ್ಟು ಸಾರ್ವಜನಿಕ ಸಭೆಯಲ್ಲಿ ಹೇಳುವುದು ಎಷ್ಟು ಸರಿ? ಕಾಂಗ್ರೆಸ್ ಸರ್ಕಾರವು ಲೂಟಿ ಮಾಡಲೆಂದೇ ಸಚಿವರನ್ನು ಇಟ್ಟುಕೊಂಡಿದೆ’ ಎಂದು ಆರೋಪಿಸಿದರು.
ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧವೇ ಸ್ಪರ್ಧಿಸುವುದಾಗಿ ತಿಳಿಸಿದರು.