ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಇದೇ 14ರಂದು ನಡೆದಿದ್ದ ರೌಡಿಶೀಟರ್ ಹಂದಿ ಅಣ್ಣಿ (36) ಹತ್ಯೆ ಪ್ರಕರಣದ ಆರೋಪಿಗಳು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ.
ಆರೋಪಿಗಳು ಭಾನುವಾರ ತಡರಾತ್ರಿ ಬಂದು ಕಚೇರಿಗೆ ಬಂದು ಶರಣಾಗಿದ್ದಾರೆ. ಅವರನ್ನು ನಗರ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗದ ವಿನೋಬನಗರದ ಕಾರ್ತಿಕ್ ಅಲಿಯಾಸ್ ಕಡ ಕಾರ್ತಿಕ್(32), ಮಲವಗೊಪ್ಪದ ಫಾರೂಕ್ (40), ಸಂತೆ ಕಡೂರಿನ ನಿತಿನ್ ಅಲಿಯಾಸ್ ಬಜರಂಗಿ ಭಾಯಿ(29), ಕೋಟೆಯ ಮಧುಸೂಧನ್ ಅಲಿಯಾಸ್ ಕರಿಯ ಮಧು (32), ಚೌಡೇಶ್ವರಿ ಕಾಲೋನಿಯ ಮಧನ್ (25), ಹುಳಗಟ್ಟಿಯ ಚಂದನ್ (22), ಹರಿಹರ ತಾಲ್ಲೂಕು ಮಲೆಬೆನ್ನೂರಿನ ಆಂಜನೇಯ ಅಲಿಯಾಸ್ ಅಂಜನಿ (26), ಮಧು (27) ಶರಣಾದವರು.
ತಲೆ ಮರೆಸಿಕೊಂಡಿದ್ದ ಆರೋಪಿಗಳು ಕೋಲಾರ, ಮುಳುಬಾಗಿಲು, ಹಾಸನ ಇತರೆಡೆ ತಿರುಗಿ ಚಿಕ್ಕಮಗಳೂರಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿನೋಬನಗರದ ಪೋಲಿಸ್ ಚೌಕಿ ಎದುರು ಹಂದಿ ಅಣ್ಣಿ ಅಲಿಯಾಸ್ ಹೊನ್ನಪ್ಪ ಅಲಿಯಾಸ್ ಅಣ್ಣೇಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.