ಚಿಕ್ಕಮಗಳೂರು: ಇರ್ತಲೆ ಹಾವು (ಸ್ಯಾಂಡ್ ಬೋವ) ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಟಿಪ್ಪುನಗರದ ಐವರುನ್ನು ಸೋಮವಾರ ಬಂಧಿಸಿ, ಹಾವು, ಕಾರು, ₹ 1.05 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಟಿಪ್ಪುನಗರದ ಗೌಸ್ ಅಲಿಯಾಸ್ ಬಾಬಾ, ಶಹಬಾಜ್ ಅಲಿಯಾಸ್ ಕಿಲ್ಲಿ, ಜಿಶಾನ್, ಮತ್ತು ಇಕ್ಬಾಲ್, ಮೂಲ್ಕಿಯ ಜೀತುಶೆಟ್ಟಿ ಅವರನ್ನು ಬಂಧಿಸಲಾಗಿದೆ.
ಈ ನಾಲ್ವರು ಒಗ್ಗೂಡಿ ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಇರ್ತಲೆ ಹಾವು ಹಿಡಿದು ತಂದಿದ್ದರು. ಮಂಗಳೂರಿನ ಮೂಲ್ಕಿಯ ಜೀತುಶೆಟ್ಟಿಗೆ ₹5 ಲಕ್ಷಕ್ಕೆ ಮಾರಾಟ ಮಾಡಲು ವ್ಯಾಪಾರ ಕುದುರಿಸಿದ್ದರು. .
ಹಾವು ಖರೀದಿಸಲು ಜೀತುಶೆಟ್ಟಿ ನಗರಕ್ಕೆ ಬಂದಿರುವುದು, ₹ 1.05 ಲಕ್ಷ ಮುಂಗಡವಾಗಿ ನೀಡಿರುವ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ತಂಡ ಕೈಗೊಂಡಿದೆ. ನಗರದ ಮಾರುಕಟ್ಟೆ ರಸ್ತೆಯ ನಗರಸಭೆ ಮಳಿಗೆ ಬಳಿ ಸಂಜೆ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಖದೀಮರನ್ನು ಹಿಡಿದಿದ್ದಾರೆ.
ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಲಯಾರಣ್ಯಾಧಿಕಾರಿ ಎಸ್.ಎಲ್.ಶಿಲ್ಪಾ ಮತ್ತು ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.