ಆಲ್ದೂರು: ಇಲ್ಲಿಗೆ ಸಮೀಪದ ಸತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಭೀಮಾ ನಗರಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ, ದಿನವಿಡೀ ನಿವಾಸಿಗಳೊಂದಿಗೆ ಇದ್ದು, ಅಹವಾಲು ಆಲಿಸಿದರು. ಇಲ್ಲಿನ ನಿವೇಶನ ರಹಿತರ ಜೊತೆಯೇ ಗಂಜಿಯೂಟ ಸೇವಿಸಿ, ಸಮಸ್ಯೆಗಳ ಬಗೆಹರಿಸುವ ಭರವಸೆ ನೀಡಿದರು.
‘ಇಲ್ಲಿ 60 ಕುಟುಂಬಗಳು ವಾಸ ಇವೆ. ಈ ನಿವೇಶನ ರಹಿತರಿಗೆ ಸರ್ಕಾರದೊಂದಿಗೆ ಚರ್ಚಿಸಿ ಹಕ್ಕುಪತ್ರವನ್ನು ಶೀಘ್ರದಲ್ಲಿ ಮಂಜೂರು ಮಾಡಿಸಿಕೊಡಲಾಗುವುದು’ ಎಂದು ಶಾಸಕ ಕುಮಾರಸ್ವಾಮಿ ತಿಳಿಸಿದರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಒತ್ತುವರಿ ತೆರವು ಮಾಡಲಾಗುವುದು. ಇದರಲ್ಲಿ ದೊರೆತ ಜಮೀನಿನಲ್ಲಿ ಸೂರು ರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿಗೆ ಬರುವ ರಸ್ತೆಯನ್ನು ಕೆಲವು ಹಿತಾಸಕ್ತಿಗಳು ಮುಚ್ಚಿದ್ದು, ಕಾನೂನು ಕ್ರಮದ ಮೂಲಕ ತೆರವು ಮಾಡಲಾಗುವುದು. ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನ ಒದಗಿಸಲಾಗುವುದು’ ಎಂದರು.
‘ಸುತ್ತಲೂ ಬೆಳೆದು ನಿಂತ ಅಕೇಶಿಯಾ ಮರ ಗಾಳಿಗೆ ಬೀಳುವ ಆತಂಕವು ನಿವಾಸಿಗಳಿಗೆ ಕಾಡುತ್ತಿದೆ. ಮರಗಳನ್ನು ತೆರವು ಮಾಡಲಾಯಿತು’ ಎಂದು ತಿಳಿಸಿದರು.
ಬಿಜೆಪಿ ಆಲ್ದೂರು ಹೋಬಳಿಗೆ ಅಧ್ಯಕ್ಷ ಸುದರ್ಶನ್, ಕಠಾರದಳ್ಳಿ ಶಿವಕುಮಾರ್, ರೇಖಾ ಅನಿಲ್, ಯೋಗೇಶ್, ರವಿ, ವಿನೋದ್, ಗೋಪಾಲ್, ರಫೀಕ್ ಇದ್ದರು.