ಶೃಂಗೇರಿ: ತಾಲ್ಲೂಕಿನಲ್ಲಿ ಕೆಎಸ್ಆರ್ಟಿಸಿ ಡಿಪೊ ಇಲ್ಲದೆ ಗ್ರಾಮೀಣ ಬಸ್ ಸೇವೆ ಸಮರ್ಪಕವಾಗಿಲ್ಲ. ಡಿಪೊ ನಿರ್ಮಾಣಕ್ಕಾಗಿ ಸ್ಥಳ ಮಂಜೂರಾಗಿ 14 ವರ್ಷ ಕಳೆದಿದೆ, ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇನ್ನೂ ನಿರ್ಮಾಣ ಭಾಗ್ಯ ಕೂಡಿಬಂದಿಲ್ಲ.
ಶೃಂಗೇರಿ ಶಾರದಾ ಪೀಠಕ್ಕೆ ಪ್ರತಿ ವರ್ಷ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ, ಜೋಗ, ಹೊರನಾಡು, ಮಂಗಳೂರು ಕಡೆಗೆ ಹೋಗುತ್ತಾರೆ. ಪ್ರವಾಸಿಗರು ಖಾಸಗಿ ಬಸ್ ನಂಬಿಕೊಂಡೇ ಬೇರೆಡೆಗೆ ಪ್ರಯಾಣಿಸುವ ಅನಿವಾರ್ಯತೆ ಇದೆ.
ಸಹಕಾರ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರ ಸ್ಥಗಿತಗೊಂಡ ನಂತರ, ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಹರಸಾಹಸವಾಗಿದೆ. ವಿದ್ಯಾಭ್ಯಾಸ, ಸರ್ಕಾರಿ ಸೌಲಭ್ಯ, ಬ್ಯಾಂಕ್, ವೈದ್ಯಕೀಯ ಸೇವೆ, ದಿನಸಿ ಎಲ್ಲದಕ್ಕೂ ಪಟ್ಟಣವನ್ನೇ ಅವಲಂಬಿಸಬೇಕಾದ ಗ್ರಾಮೀಣ ಜನರ ಪರಿಸ್ಥಿತಿ ಹೇಳತೀರದು.
ಪೋಷಕರು ತಮ್ಮ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಪ್ರತಿದಿನವೂ ಶಾಲಾ, ಕಾಲೇಜುಗಳಿಗೆ ಕಳುಹಿಸುವ ಸ್ಥಿತಿ ಇದೆ. ಆರೋಗ್ಯ ಸೇವೆ ಮತ್ತಿತರ ಕಾರಣಕ್ಕಾಗಿ ಪಟ್ಟಣಕ್ಕೆ ಬರುವವರು ಆಟೊ ಅಥವಾ ಖಾಸಗಿ ವಾಹನವನ್ನು ಅವಲಂಬಿಸಬೇಕಿದೆ.