ಚಿಕ್ಕಮಗಳೂರು: ‘ಸಿದ್ದರಾಮಯ್ಯ ಜನ ಪ್ರೀತಿ ಇಟ್ಟುಕೊಂಡಿದ್ದರೆ ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಹೋಗಿ ಪರದಾಡಿ ಗೆಲ್ಲುವ ಸ್ಥಿತಿ ಬರುತ್ತಿರಲಿಲ್ಲ’ ಎಂದು ಪ್ರವಾಸೋದ್ಯಮ, ಕನ್ನಡ–ಸಂಸ್ಕೃತಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಗಾರರೊಂದಿಗೆ ಮಾತನಾಡಿ,‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ಯಾಕೆ ಸೋಲಿಸಿದರು ಎಂಬುದನ್ನು ಅವರು ಅರ್ಥ ಮಾಡಿಕೊಂಡರೆ ಈ ತರಹ ಮಾತಾಡುವುದನ್ನು ಮುಂದುವರಿಸುವುದಿಲ್ಲ. ಅವರಿಗೆ ಸೋಲಿನ ಕಾರಣ ಅರ್ಥವಾದರೆ ಮಾತ್ರ ರವಿ ಯಾಕೆ ಗೆಲ್ಲುತ್ತಾನೆ ಎಂಬುದೂ ಅರ್ಥವಾಗುತ್ತದೆ’ ಎಂದು ಉತ್ತರಿಸಿದರು.
‘ಕೇಂದ್ರ ಸರ್ಕಾರವು ಎನ್ಆಡಿಆರ್ಎಫ್ ಪ್ರಕಾರ ಕೊಡಬೇಕಾದ್ದನ್ನು ಕರ್ನಾಟಕಕ್ಕೆ ಕೊಟ್ಟೇ ಕೊಡುತ್ತದೆ. ಕೇಂದ್ರ ಸರ್ಕಾರದೊಂದಿಗೆ ಮಾತನಾಡಿದ್ದೇವೆ. ಈ ಬಗ್ಗೆ ಆತಂಕ ಬೇಡ’ ಎಂದು ಪ್ರತಿಕ್ರಿಯಿಸಿದರು.
‘ನದಿ, ಋಷಿ ಮೂಲ ಹುಡುಕಬಾರದು ಎಂದು ಹಿರಿಯರು ಹೇಳುತ್ತಾರೆ. ಅದನ್ನು ಪಾಲಿಸುತ್ತೇನೆ. ಕೋಡಿಶ್ರೀ ಅವರು ಹೇಳಿದ ಭವಿಷ್ಯ ಎಲ್ಲವೂ ನಿಜವಾಗಿಲ್ಲ, ಏಲ್ಲವೂ ಸುಳ್ಳು ಆಗಿಲ್ಲ’ ಎಂದು ಉತ್ತರಿಸಿದರು.
‘ಹಿಂದಿನ ಸ್ಪೀಕರ್ ರಮೇಶ್ಕುಮಾರ್ ತೀರ್ಮಾನವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ತೀರ್ಪು ಇನ್ನು ಬರಬೇಕಿದೆ. ಚುನಾವಣೆಗೆ ಬಿಜೆಪಿ ಸಿದ್ಧವಿದೆ. ಎಂಥ ಸಂದರ್ಭ ಎದುರಾದರೂ ಎದುರಿಸಲು ಪಕ್ಷ ಸಿದ್ಧ ಇದೆ. ಅನರ್ಹರಿಗೆ ಸಂಬಂಧಿಸಿದಂತೆ ಕೋರ್ಟ್ ನೀಡುವ ತೀರ್ಪು ಪ್ರಮುಖವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.