ಗೌರಿಬಿದನೂರು: ದೇಶದ ಎಲ್ಲೆಡೆ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ತಡೆಯಲು ಒಗ್ಗಟ್ಟಿನ ಕಾನೂನು ಹೋರಾಟ ಅನಿವಾರ್ಯ ಎಂದು ಗುಜರಾತ್ ರಾಜ್ಯದ ಶಾಸಕ ಜಿಗ್ನೇಶ್ ಮೇವಾನಿ ಅಭಿಪ್ರಯಪಟ್ಟರು.
ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ತೆಗೆದು ಹಾಕಲು ಮುಂದಾಗಿದೆ. ಇದರಿಂದ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿ, ದೌರ್ಜನ್ಯ ಪ್ರಕರಣಗಳು ಹೆಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶ ಏನೇ ಇರಲಿ, ದಲಿತರಿಗೆ ನ್ಯಾಯ ಬೇಕಾಗಿದೆ. ಎಲ್ಲರೂ ಪ್ರತಿರೋಧ, ಛಲದಿಂದ ಹೋರಾಟಕ್ಕೆ ಮುನ್ನುಗ್ಗಬೇಕಾಗಿದೆ. ರಾಷ್ಟ್ರಪತಿ ಮೇಲೆ ಒತ್ತಡ ಹೇರಿ ಸಂವಿಧಾನಾತ್ಮಕ ಹಕ್ಕು ಪಡೆಯಲು ಸಜ್ಜಾಗಬೇಕು ಎಂದು ಹೇಳಿದರು.
ಅದೀಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್. ಮುನಿಸ್ವಾಮಿ ಮಾತನಾಡಿ, 'ದೇಶದಲ್ಲಿ ದಲಿತರ ಹಿತರಕ್ಷಣೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಕರಡು ಪ್ರತಿಯನ್ನೇ ತಿರುಚಲು ಹೊರಟಿರುವುದು ದುರದೃಷ್ಟಕರ. ರಾಜ್ಯ ದಲಿತ ಮತದಾರರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷಗಳಿಗೆ ಮತ ನೀಡಬಾರದು. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.