ತರೀಕೆರೆ: ಪಟ್ಟಣದ ವಿ.ಐ.ಎಲ್. ಕಾರ್ಖಾನೆಯ ದಿನಗೂಲಿ ಗುತ್ತಿಗೆ ನೌಕರರರು ಆಡಳಿತ ಮಂಡಳಿಯ ವಿರುದ್ಧ ಬುಧವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಕಾರ್ಖಾನೆಯಲ್ಲಿ ನೌಕರರಿಗೆ ಕೆಲಸವನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಯಾವುದೇ ಮೂಲಸೌಕರ್ಯಗಳನ್ನು ಈವರೆಗೂ ನೀಡಿಲ್ಲ. ಮೂರು ತಿಂಗಳಿನಿಂದಲೂ ವೇತನ ನೀಡಿಲ್ಲ. ಬಡ ಕಾರ್ಮಿಕರಾಗಿರುವ ನಮ್ಮ ಮೇಲೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುವ ಮೂಲಕ ಕಾರ್ಮಿಕ ಕಾಯ್ದೆಯಲ್ಲಿ ನೀಡಲಾಗಿರುವ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.
‘ಬೆಳಿಗ್ಗೆಯಿಂದಲೂ ತಿಂಡಿ ಊಟವಿಲ್ಲದೇ ಪ್ರತಿಭಟಿಸುತ್ತಿದ್ದರೂ ಸೌಜನ್ಯಕ್ಕೂ ಆಡಳಿತಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ. ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿ ಭಯವನ್ನು ಹುಟ್ಟಿಸುತ್ತಿದ್ದಾರೆ. ನ್ಯಾಯಯುತ ಪರಿಹಾರ ಸಿಗದೇ ಹೋದರೆ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಮುಖಂಡ ಶ್ರೀನಿವಾಸ್, ಉಮೇಶ್, ರಮೇಶ್, ನಾಗರಾಜು ವಹಿಸಿದ್ದರು.