ಚಿಕ್ಕಮಗಳೂರು: ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್ಎಸ್ಯುಐ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಐಡಿಎಸ್ಜಿ ಕಾಲೇಜು ಎದುರು ಸೇರಿದ ಪ್ರತಿಭಟನಕಾರರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.
ಒಕ್ಕೂಟದ ಜಿಲ್ಲಾಘಟಕದ ಅಧ್ಯಕ್ಷ ಸಿ.ಕೆ.ಶ್ರೀಕಾಂತ್ ಮಾತನಾಡಿ, ಪದವಿ ಸೆಮಿಸ್ಟರ್ಗಳು ಡಿಸೆಂಬರ್ ಕೊನೆಗೆ ಪೂರ್ಣಗೊಳ್ಳುತ್ತವೆ. ಈ ಬಗ್ಗೆ ವಿಶ್ವವಿದ್ಯಾಲಯಗಳು ಮಾರ್ಗಸೂಚಿ ಬಿಡುಗಡೆಗೊಳಿಸಿವೆ. ಆದರೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ಜೂನ್ಗೆ ಅಂತ್ಯವಾಗಿವೆ. ಅದರಿಂದ ಹಣ ನೀಡಿ, ಬಸ್ಗಳಲ್ಲಿ ಪ್ರಯಾಣಿಸುವಂತಾಗಿದ್ದು, ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳಿದ್ದರೆ, ಕೆಎಸ್ಆರ್ಟಿಸಿ ಚಾಲಕರು ಬಸ್ ನಿಲುಗಡೆ ಮಾಡುವುದಿಲ್ಲ. ಅದರಿಂದ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಚಾಲಕರಿಗೆ ಸೂಚನೆ ನೀಡಬೇಕು. ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಘಟಕದ ಉಪಾಧ್ಯಕ್ಷ ದರ್ಶನ್, ಮುಖಂಡರಾದ ಸೈಫ್ಅಲಿಖಾನ್, ಸುಮಂತ್, ಉಮೇಶ್, ಪ್ರಜ್ವಲ್, ಜಾಕೀರ್ಹುಸೇನ್ ಇದ್ದರು.