ಕೊಪ್ಪ: ತಾಲ್ಲೂಕಿನ ಹರಿಹರಪುರ ಸಮೀಪದ ತುಂಗಾ ನದಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಹರಿಹರಪುರ ಸಮೀಪದ ಅಭಿಮಾನ್ ನಗರ ನಿವಾಸಿಗಳಾದ ಉಮೇಶ (37), ಪತ್ನಿ ಶಶಿಕಲಾ (32) ಹಾಗೂ ಶಶಿಕಲಾ ಅವರ ತಾಯಿ ತಾಲ್ಲೂಕಿನ ಅಂದಗಾರು ಸಮೀಪದ ಹುಲುಗಾರಿನವರಾದ ಸುಬ್ಬಮ್ಮ (60) ಮೃತಪಟ್ಟವರು. ಮೃತರು ಒಬ್ಬರಿಗೊಬ್ಬರ ಕೈಗೆ ವೇಲ್ನಿಂದ ಕಟ್ಟಿಕೊಂಡಿದ್ದರು.
ಬುಧವಾರದಂದು ಶಶಿಕಲಾ ತವರು ಮನೆಗೆ ಹೋಗಿದ್ದ ದಂಪತಿ, ಗುರುವಾರ ಅಲ್ಲಿಂದ ವಾಪಸಾಗಿದ್ದು, ಮನೆಗೆ ಬಂದಿರಲಿಲ್ಲ. ಈ ಕುರಿತು ಮೃತ ಶಶಿಕಲಾ ಕುಟುಂಬದವರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐದು ದಿನಗಳ ಹಿಂದೆ ಉಮೇಶ್ ಮತ್ತು ಶಶಿಕಲಾ ಅವರ 2 ವರ್ಷದ ಮಗಳಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು.
ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್ ಎರ್ರಿಸ್ವಾಮಿ, ಹರಿಹರಪುರ ಪಿಎಸ್ಐ ರಘುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದರು.