ಚಿಕ್ಕಮಗಳೂರು: ಶೃಂಗೇರಿ ತಹಶೀಲ್ದಾರ್ ವಾಹನ ಚಾಲಕ ವಿಜೇತ (24) ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಹೆಗ್ತೂರಿನ ಅವರ ಮನೆ ಪಕ್ಕದ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ.
ವಿಜೇತ ಅವರು ಕೆಲಸ ಮುಗಿಸಿ ಸಂಜೆ ಹೆಗ್ತೂರಿಗೆ ತೆರಳಿದ್ದರು. ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ. ಅವರು ಕೆಲ ವರ್ಷಗಳಿಂದ ತಹಶೀಲ್ದಾರ್ ವಾಹನ ಚಾಲಕರಾಗಿದ್ದರು.
ಶೃಂಗೇರಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದೆ.
ವಿಜೇತ ಅವರ ಸಹೋದರ ವಿನಯ್ ಅವರು ಶೃಂಗೇರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ಸಹೋದರ ವಿಜೇತ ಶನಿವಾರ ಬೆಳಿಗ್ಗೆಯಿಂದ ಖಿನ್ನತೆಯಿಂದ ಇದ್ದ. 27ರಂದು ಸಂಜೆ ತಹಶೀಲ್ದಾರ್ ಕೊಠಡಿಯ ಬೀರುವಿನ ಬೀಗ ತೆಗೆದು ಯಾರೋ ಬಿಟ್ಟು ಹೋದ ಪ್ರಕರಣವಾದ ನಂತರ ಕಚೇರಿಯವರು ತನ್ನನ್ನು ಅನುಮಾನದಿಂದ ನೋಡುತ್ತಿದ್ದಾಗಿ ವಿಜೇತ ಹೇಳಿಕೊಂಡಿದ್ದ’ ಎಂದು ಕುಟುಂಬದವರು ಹೇಳಿದ್ದಾರೆ.