ಕೊಪ್ಪ: ಗೌರಿ ಗಣೇಶ ಹಬ್ಬ ಮುಕ್ತಾಯಗೊಂಡು ವಾರ ಕಳೆದರೂ ತರಕಾರಿ ದರ ಏರುಗತಿಯಲ್ಲೇ ಸಾಗಿದೆ.
ಪ್ರತಿದಿನ ತರಕಾರಿ ದರ ವ್ಯತ್ಯಾಸವಾಗುತ್ತಿದೆ. ತಾಲ್ಲೂಕಿನಲ್ಲಿ ತರಕಾರಿ ಬೆಳೆಗಾರರು ಕಡಿಮೆ ಇದ್ದು, ವ್ಯಾಪಾರಸ್ಥರು ತರೀಕೆರೆ, ಚಿಕ್ಕಮಗಳೂರು ಎ.ಪಿ.ಎಂ.ಸಿಯಲ್ಲಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಗ್ರಾಹಕರು ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.
ಕಳೆದ ವಾರವಷ್ಟೇ ಹಬ್ಬ ಮುಕ್ತಾಯಗೊಂಡಿದ್ದರಿಂದ ಸಹಜವಾಗಿ ಈ ವಾರದಲ್ಲಿ ತರಕಾರಿ ಬೆಲೆ ಕಡಿಮೆಯಾಗಬೇಕಿತ್ತು, ಆದರೆ, ಕಡಿಮೆಯಾಗಿಲ್ಲ. ಮಳೆ ಕಾರಣದಿಂದ ಬೆಲೆ ಹೆಚ್ಚಾಗಿದೆ ಎಂಬುದು ತರಕಾರಿ ವ್ಯಾಪಾರಸ್ಥರು ಹೇಳುವ ಮಾತು. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಬೆಲೆಯಲ್ಲಿ ಅಜಗಜಾಂತರ ಇದೆ.
ಕಳೆದ ವಾರದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಲೆಕ್ಕದಲ್ಲಿ ಇದ್ದ ಟೊಮೆಟೊ ಸಹಿತ ಬಹುತೇಕ ತರಕಾರಿಗಳ ಬೆಲೆ ಈ ವಾರ ಹೆಚ್ಚಾಗಿದೆ.
ಪಟ್ಟಣದ ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವವರು ಸಗಟು ಮಾರಾಟದ ಬೆಲೆಯಲ್ಲಿ ಕೊಡುವುದರಿಂದ ಹೆಚ್ಚಿನ ಗ್ರಾಹಕರು ಅಲ್ಲಿಯೇ ಖರೀದಿಸುತ್ತಿದ್ದಾರೆ. ಕೆಲವು ವ್ಯಾಪಾರಸ್ಥರು ಬೆಳೆಗಾರರಿಂದಲೇ ನೇರವಾಗಿ ತರಕಾರಿ ಖರೀದಿಸಿ, ವ್ಯಾಪಾರ ಮಾಡುವುದರಿಂದ ಗ್ರಾಹಕರಿಗೆ ಇದರಿಂದ ತುಸು ಲಾಭಸಿಕ್ಕಿದೆ.
ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಗೃಹಿಣಿಯರು ಸೇರಿದಂತೆ ಗ್ರಾಹಕರು ಕಾಯುತ್ತಿದ್ದಾರೆ.