ಕಡೂರು: ತಾಲ್ಲೂಕಿನ ಅತಿದೊಡ್ಡ ಕೆರೆ, ಹೇಮಗಿರಿ ತಪ್ಪಲಿನ ವಿಷ್ಣು ಸಮುದ್ರ ಕೆರೆ 14 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೆರೆಯ ಸೌಂದರ್ಯ ಕಣ್ತುಂಬಿಸಿಕೊಳ್ಳಲು ಜನ ಸಾಗರ ಬರುತ್ತಿದೆ.
ಹೊಯ್ಸಳ ದೊರೆ ವಿಷ್ಣುವರ್ಧನ 400 ಬ್ರಾಹ್ಮಣ ಕುಟುಂಬಗಳ ಅಗ್ರಹಾರ ಸ್ಥಾಪಿಸಿ ಅಲ್ಲಿ ಶೈವ, ವೈಷ್ಣವ ದೇವಸ್ಥಾನ ಗಳನ್ನು ನಿರ್ಮಾಣ ಮಾಡಿ, ಹೇಮಾವತಿ ಪಟ್ಟಣ ಎಂದು ಹೆಸರಿಟ್ಟದ್ದರು. ಇಲ್ಲಿಯೇ ವಿಶಾಲ ಕೆರೆಯೊಂದನ್ನು ನಿರ್ಮಿಸಿ ಅದಕ್ಕೆ ವಿಷ್ಣುಸಮುದ್ರ ಎಂದು ಕರೆದರು ಎಂಬುದಕ್ಕೆ ಶಾಸನಗಳ ಆಧಾರಗಳಿವೆ.
ಕ್ರಿ.ಶ.1259ರಲ್ಲಿ ಮಹಾವಡ್ಡಬೆವ ಹಾರಿ ಸೋವಾಸಿ ಮಾಧವ ಭಟ್ಟಯ್ಯರ ಮಗ ಅಲ್ಲಾಳದೇವನು ವಿಷ್ಣುಸಮುದ್ರ ಕೆರೆ ನಿರ್ವಹಣೆಗೆ 200 ಗದ್ಯಾಣವನ್ನು ದಾನ ನೀಡಿದ್ದರು. ಇದರ ಬಡ್ಡಿಯ 30 ಗದ್ಯಾಣದಿಂದ ಪ್ರತಿವರ್ಷ ಕೆರೆ ತೂಬು ದುರಸ್ತಿಯನ್ನು ನಿರ್ವಹಿಸಲಾಗುತ್ತಿದೆ ಎಂದು ಶಾಸನ ಉಲ್ಲೇಖಿಸಿದೆ.
ಕೆರೆಯ ಒಂದು ಭಾಗದಲ್ಲಿ ಕೆರೆ ಸಂತೆ ಗ್ರಾಮ ಮತ್ತೊಂದು ಭಾಗದಲ್ಲಿ ಹೇಮಗಿರಿ ಗ್ರಾಮವಿದೆ. ಈ ಕೆರೆಗೆ ದೇವನೂರು ಕೆರೆ ತುಂಬಿದರೆ ಅಲ್ಲಿನ ಹೆಚ್ಚುವರಿ ನೀರಲ್ಲದೆ, ದುದ್ದ, ಹಾರನಹಳ್ಲಿ ಕಡೆ ಮಳೆ ಹೆಚ್ಚಾದರೆ ಅಲ್ಲಿಂದಲೂ ನೀರು ಬರುತ್ತದೆ.
2008-09 ರಲ್ಲಿ ತುಂಬಿದ್ದ ಕೆರೆ ನಂತರದಲ್ಲಿ ಸಂಪೂರ್ಣ ಬತ್ತಿ ಹೋಗಿ ಭಣಗುಡುತ್ತಿತ್ತು. ಗಿಡಗಂಟಿಗಳಿಂದ ತುಂಬಿ ಹೋಗಿತ್ತು. 14 ವರ್ಷಗಳ ನಂತರ ತುಂಬಿರುವ ಈ ಕೆರೆ ಯಗಟಿ ಸಿಂಗಟಗೆರೆ,ಪಂಚನಹಳ್ಳಿ ಹೋಬಳಿಗಳ ಅಂತರ್ಜಲ ಮಟ್ಟ ಉತ್ತಮಗೊಳ್ಳಲು ಪೂರಕವಾಗಿದೆ.