ಬೆಂಗಳೂರು: ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹42.40 ಲಕ್ಷ ನಗದನ್ನು ಮಡಿವಾಳ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ಜಪ್ತಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಡಿವಾಳದಲ್ಲಿರುವ ಚಿತ್ರ ಮಂದಿರವೊಂದರ ಮಾಲೀಕ ಸಾಯಿ ಚರಣ್ ಮತ್ತು ಕಾರು ಚಾಲಕ ಸಂತೋಷ್ ಅವರನ್ನು ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ತಡೆಯಲು ಮ್ಯಾಥಿವ್ ಆಸ್ಪತ್ರೆ ಎದುರು ಆರಂಭಿಸಲಾಗಿರುವ ಚೆಕ್ಪೋಸ್ಟ್ನ ಸಿಬ್ಬಂದಿ ತಪಾಸಣೆಗಾಗಿ ಕಾರು ತಡೆದಾಗ ನಗದು ಪತ್ತೆಯಾಗಿದೆ.
‘ಕಾರಿನಲ್ಲಿರುವ ಹಣದ ಬಗ್ಗೆ ಸಿಬ್ಬಂದಿ ದಾಖಲೆ ಕೇಳಿದಾಗ, ಚಿತ್ರ ಮಂದಿರದ ಆದಾಯವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಸಾಯಿ ಚರಣ್ ಸಮಜಾಯಿಷಿ ನೀಡಿದರು. ಆದರೆ, ಆ ಬಗ್ಗೆ ಯಾವುದೇ ದಾಖಲೆಗಳಿಲ್ಲ ದಿರುವುದರಿಂದ ಹಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.