ಸಕಲೇಶಪುರದ ಗಡಿ ಭಾಗದಿಂದ ಬಂದಿರಬಹುದು ಎಂದು ಶಂಕಿಸಲಾಗಿರುವ ಮೂರು ಕಾಡಾನೆಗಳು ಗುರುವಾರ ನಸುಕಿನಲ್ಲಿ ತಾಲ್ಲೂಕಿನ ಅಣಜೂರು ಗ್ರಾಮಕ್ಕೆ ಪ್ರವೇಶಿಸಿದ್ದು, ಅಣಜೂರು, ಮುತ್ತಿಗೆಪುರ ಗ್ರಾಮಗಳಲ್ಲಿ ಸಂಚರಿಸಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿವೆ. ಬೆಳಿಗ್ಗೆ 7 ರ ಸುಮಾರಿಗೆ ಮುತ್ತಿಗೆಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 173 ನ್ನು ದಾಟಿದ್ದು, ವಾಹನ ಸವಾರರು ಆತಂಕಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಿದರು.