ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ

ನಾಗದೇವತೆ ವಿಗ್ರಹಗಳಿಗೆ ಹಾಲೆರೆಯುವ ಮೂಲಕ ಶ್ರದ್ಧಾ–ಭಕ್ತಿ ಸಮರ್ಪಣೆ
Last Updated 13 ಆಗಸ್ಟ್ 2021, 12:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಶ್ರಾವಣ ಮಾಸ ಹಬ್ಬಗಳ ಸಾಲು. ಮೊದಲ ಮಂಗಳಗೌರಿ ವ್ರತಾಚರಣೆ ಬಳಿಕ ಬರುವ ಪ್ರಮುಖ ಹಬ್ಬವಾದ ‘ನಾಗರಪಂಚಮಿ’ಯನ್ನು ಶುಕ್ರವಾರ ಜಿಲ್ಲೆಯ ಹಲವೆಡೆ ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.

ಅನೇಕರು ಶುಚಿಗೊಳಿಸಿದ ನಾಗರಕಟ್ಟೆಗಳತ್ತ ಮನೆಮಂದಿಯೆಲ್ಲ ಜತೆಗೂಡಿ ತೆರಳಿದರು. ನಾಗದೇವತೆ ವಿಗ್ರಹಗಳಿಗೆ ಹಾಲೆರೆಯುವ ಮೂಲಕ ಹಬ್ಬದ ಆಚರಣೆ ನಡೆಯಿತು. ಮೊದಲ ಅಲೆಯಲ್ಲಿ ಇದ್ದಂಥ ಕೋವಿಡ್ ಭೀತಿ ಈ ಬಾರಿ ಕಾಣಲಿಲ್ಲ. ಆದರೆ, ಹಿಂದಿನ ವರ್ಷದಂತೆಯೇ ಈ ಬಾರಿಯೂ ಹೆಚ್ಚು ಸಂಭ್ರಮ ಬಹುತೇಕ ಕಡೆ ಇರಲಿಲ್ಲ.

ಸಡಗರದಿಂದ ಆಚರಿಸುವ ಹಬ್ಬಗಳ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದರೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯ ಜನರು ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಹಬ್ಬ ಆಚರಿಸಲು ಮುಂದಾದರು. ಆದರೆ, ನಾಗರಕಟ್ಟೆಗಳ ಬಳಿ ಎಂದಿನಂತೆ ಹೆಚ್ಚಿನ ಜನ ಕಂಡುಬರಲಿಲ್ಲ.

ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಅರಳಿಟ್ಟು, ತಂಬಿಟ್ಟು, ಚಿಗಳಿ, ತಮಟ, ಅಳ್ಳು, ಕಡಲೆಕಾಳು, ಗೆಜ್ಜೆವಸ್ತ್ರ, ತೆಂಗಿನಕಾಯಿ, ಬಾಳೆಹಣ್ಣು ಸೇರಿ ಇತರ ಪೂಜಾ ಸಾಮಗ್ರಿಗಳೊಂದಿಗೆ ನಾಗರಕಟ್ಟೆಗಳಿಗೆ ಸಂಭ್ರಮದಿಂದ ಬಂದರು. ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿ, ಪೂಜೆ ಸಮರ್ಪಿಸಿದರು. ಭಕ್ತಿ, ಶ್ರದ್ಧೆಯಿಂದ ಆಚರಿಸುವ ಈ ಹಬ್ಬದಲ್ಲಿ ಕೆಲವರು ಬೆಳ್ಳಿ ನಾಗರ ಮತ್ತು ಚಿನ್ನದ ನಾಗರವನ್ನು ನಾಗದೇವತೆಗೆ ಅರ್ಪಿಸುವ ಸಂಪ್ರದಾಯ ಮುಂದುವರಿಯಿತು.

ನಾಗರಪಂಚಮಿ ದಿನ ನಾಗಗಳಿಗೆ ವಿಶೇಷ ದಿನವಾದ್ದರಿಂದ ಭಕ್ತರು ಕುಟುಂಬದ ಒಳಿತಿಗಾಗಿ ನಾಗದೇವರಿಗೆ ಪೂಜೆ ಸಲ್ಲಿಸಿದರು. ನಾಗರ ಚೌತಿ ದಿನ ಹಾಲನ್ನು ಎರೆದ ನಂತರ ಕೆಲವರು ಹುತ್ತದ ಮಣ್ಣನ್ನು ಮನೆಗೆ ತಂದು ಅದರಿಂದ ನಾಗದೇವತೆ ನಿರ್ಮಿಸಿ, ಪಂಚಮಿಯಂದು ಮನೆಯಲ್ಲಿ ಮಣ್ಣಿನ ನಾಗದೇವರಿಗೆ ಹಾಲನ್ನು ಎರೆಯುವುದು ಸಂಪ್ರದಾಯ. ಅದರಂತೆ ವಿವಿಧೆಡೆ ಪೂಜೆ ನೆರವೇರಿತು. ಆದರೆ, ಹುತ್ತದ ಮಣ್ಣನ್ನು ತರಲಾಗದವರು ದೇವರ ಕೋಣೆಯಲ್ಲಿಯ ಬೆಳ್ಳಿಯ ನಾಗದೇವತೆಗೆ ಹಾಲು ಎರೆದು ಭಕ್ತಿ ಸಮರ್ಪಿಸಿದರು.

ಹಬ್ಬಕ್ಕಾಗಿ ಮನೆಯಲ್ಲಿ ವಿಶೇಷವಾಗಿ ಎಳ್ಳುಂಡೆ, ಶೇಂಗಾ, ಕಡಲೆ ಸೇರಿ ವಿವಿಧ ಉಂಡೆಗಳನ್ನು ತಯಾರಿಸಿದ್ದರು. ಪೂಜೆ ನೆರವೇರಿಸಿದ ಬಳಿಕ ಮನೆಗೆ ಬಂದು ಕೆಲವರು ಉಂಡೆಗಳ ರುಚಿಯನ್ನು ಆಸ್ವಾದಿಸಿದರು. ಎಡೆಗಾಗಿ ತಯಾರಿಸಿದ್ದ ವಿಶೇಷ ಖಾದ್ಯವನ್ನು ಮನೆ–ಮಂದಿ ಜತೆಗೂಡಿ ಸವಿದರು.

ಬರಗೇರಮ್ಮ ದೇಗುಲ, ಉಚ್ಚಂಗಿಯಲ್ಲಮ್ಮ ದೇಗುಲ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಕಾಳಿ ಕಮಠೇಶ್ವರಿ ದೇವಿ ದೇಗುಲ, ಬನ್ನಿಕಾಳಮ್ಮ ದೇಗುಲ, ಜೋಗಿಮಟ್ಟಿ ರಸ್ತೆ, ರಂಗಯ್ಯನ ಬಾಗಿಲು, ಕಾಮನಬಾವಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿರುವ ನಾಗರಕಟ್ಟೆಗಳಿಗೆ, ನಾಗರ ಹುತ್ತಗಳಿಗೆ ಭಕ್ತರು ಹಾಲು ಎರೆದರು.

ಪಂಚಮಿ ಮತ್ತು ಚೌತಿ ದಿನ ಹಬ್ಬ ಆಚರಿಸದ ಕೆಲವರು ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬ ಮುಗಿಯುವುದರೊಳಗೆ ಯಾವುದಾದರೊಂದು ದಿನ ನಾಗದೇವರಿಗೆ ಹಾಲು ಎರೆಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.

ಮರೆಯಾದ ರೊಟ್ಟಿ ಹಬ್ಬದ ಸಂಭ್ರಮ

ಚೌತಿ ಹಿಂದಿನ ದಿನ ಮಹಿಳೆಯರು ಮನೆಯಲ್ಲಿ ಬಗೆಬಗೆಯ ರೊಟ್ಟಿಗಳನ್ನು ತಯಾರಿಸಿ ‘ರೊಟ್ಟಿ ಹಬ್ಬ’ ಆಚರಿಸುವುದು ವಾಡಿಕೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಆಚರಣೆ ನಡೆದರು ಕೂಡ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿಯೂ ನೀರಸವಾಗಿತ್ತು.

ಹಬ್ಬದಂದು ಸ್ನೇಹಿತರ, ಸಂಬಂಧಿಕರ ಮನೆ, ಮನೆಗಳಿಗೆ ತೆರಳಿ ರೊಟ್ಟಿ, ಪಲ್ಯ ಹಂಚಿ ಬರುವುದು ಸಾಮಾನ್ಯ. ಆದರೆ, ಈ ಬಾರಿ ಅಂತಹ ದೃಶ್ಯ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT