ಚಿತ್ರದುರ್ಗ: ಪ್ರೀತಿಸಿದ 17ರ ಹರೆಯದ ಬಾಲಕಿ ಬೇರೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಕುಪಿತಗೊಂಡ ಅದೇ ವಯಸ್ಸಿನ ಬಾಲಕ ಆಕೆಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ತಾಲ್ಲೂಕಿನ ಬೆಟ್ಟವೊಂದರಲ್ಲಿ ಪತ್ತೆಯಾದ ಬಾಲಕಿಯ ಶವ ಪ್ರಕರಣವನ್ನು ಬಹಿರಂಗಪಡಿಸಿದೆ. ಮನನೊಂದ ಆರೋಪಿ ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಾಲಕ ಮತ್ತು ಬಾಲಕಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ವರಸೆಯಲ್ಲಿ ಸಹೋದರ ಸಂಬಂಧಿಗಳಾಗಿದ್ದರಿಂದ ಪೋಷಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ನಡುವೆ ಬಾಲಕಿಗೆ ಬೇರೊಬ್ಬ ವರನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಕುಪಿತಗೊಂಡ ಬಾಲಕ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜ.27ರಂದು ಬಾಲಕಿಯನ್ನು ಪುಸಲಾಯಿಸಿ ಬೆಟ್ಟಕ್ಕೆ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿ ಕೊಲೆಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಾಲಕಿ ನಾಪತ್ತೆಯಾದ ಪ್ರಕರಣ ದಾಖಲಾಗಿತ್ತು.