ಹಿರಿಯೂರು: ಗೋಡೆಯ ಮೇಲೆ ರಕ್ತದಲ್ಲಿ ಸಾವಿನ ಕಾರಣ ಬರೆದಿಟ್ಟು ವ್ಯಕ್ತಿಯೊಬ್ಬರು ಇಲ್ಲಿನ ಕೆಎಸ್ಆರ್ಟಿಸಿ ಎದುರಿನ ಅಯ್ಯಂಗಾರ್ ಬೇಕರಿಯ ಎರಡನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭೀಮಸಮುದ್ರದ ಬಳಿಯ ಬೊಮ್ಮೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರ ಮಗ ವೆಂಕಟೇಶ (35) ಮೃತ ವ್ಯಕ್ತಿ. ‘ಪೊಲೀಸರು ನನ್ನ ದೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮದುವೆ ನನ್ನ ಸಾವಿಗೆ ಕಾರಣ. ಇದೆಲ್ಲ ಹರಳಯ್ಯ ಮಠದ ಜಯಣ್ಣ ಎಂಬುವವರಿಗೆ ಗೊತ್ತು’ ಎಂಬಿತ್ಯಾದಿ ಸಾಲುಗಳನ್ನು ರಕ್ತದಲ್ಲಿ ಗೋಡೆಯ ಮೇಲೆ ಬರೆದಿದ್ದಾರೆ.
‘ವೆಂಕಟೇಶ್ 25 ವರ್ಷಗಳಿಂದ ಚಿತ್ರದುರ್ಗದ ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯಾವಾಗಲೋ ಒಮ್ಮೆ ಮನೆಗೆ ಬರುತ್ತಿದ್ದರು. ಕುಡಿತದ ಚಟವಿದ್ದರಿಂದ ಎಲ್ಲೆಂದರಲ್ಲಿ ಮಲಗುತ್ತಿದ್ದ. ರಾತ್ರಿ ವೇಳೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ. ಪೊಲೀಸರು ಅಲ್ಲಿಂದ ಗದರಿಸಿ ಓಡಿಸಿರಬಹುದು. ಜಯಣ್ಣ ಎಂಬ ವ್ಯಕ್ತಿ ಯಾರೆಂದು ತಿಳಿದಿಲ್ಲ. ಕುಡುಕ ಎಂದು ಯಾರೂ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ದುಡಿದ ಹಣದಲ್ಲಿ ಎಂದೂ ಮನೆಗೆ ಒಂದು ಪೈಸೆ ಕೊಟ್ಟಿಲ್ಲ’ ಎಂದು ತಂದೆ ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐಗಳಾದ ರಾಘವೇಂದ್ರ, ಶಿವಕುಮಾರ್ ಭೇಟಿ ನೀಡಿದ್ದರು.