ಹೊಳಲ್ಕೆರೆ: ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ದೂರಿದರು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭೂ ಸುಧಾರಣೆ ಕಾಯ್ದೆ ಮೂಲಕ ಮೊದಲು ರೈತರಿಂದ ಭೂಮಿಯನ್ನು ಕಸಿದುಕೊಂಡು, ನಂತರ ಎಪಿಎಂಸಿ ಕಾಯ್ದೆ ಮೂಲಕ ಅವರು ಬೆಳೆದ ಬೆಳೆಯನ್ನೂ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಎಪಿಎಂಸಿ ಕಾಯ್ದೆಯಿಂದ ವ್ಯಾಪಾರಿಗಳು ರೈತರ ಮೇಲೆ ಹಿಡಿತ ಸಾಧಿಸುತ್ತಾರೆ. ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸಂಗ್ರಹಿಸುವ ಮೂಲಕ ಕೃತಕ ಅಭಾವ ಸೃಷ್ಟಿಸುತ್ತಾರೆ. ಆಗ ಆಹಾರ ಭದ್ರತೆ ಇಲ್ಲದಂತಾಗಿ ರೈತರಲ್ಲದೆ ಮಧ್ಯಮ ವರ್ಗದ ಜನರಿಗೂ ತೊಂದರೆ ಆಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಣಕು ಶವಯಾತ್ರೆ ನಡೆಸಿ ಮುಖ್ಯವೃತ್ತದಲ್ಲಿ ಪ್ರತಿಕೃತಿ ದಹನ ಮಾಡಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೊಟ್ರೆ ಶಂಕರಪ್ಪ, ಅಪ್ಪರಸನ ಹಳ್ಳಿ ಬಸವರಾಜಪ್ಪ, ಉಪಾಧ್ಯಕ್ಷ ಜಿ.ಎಲ್.ಜೀವನ್, ಕಾರ್ಯದರ್ಶಿ ಉಮೇಶ್, ಹಸಿರು ಸೇನೆಯ ಜಯಣ್ಣ, ಲೋಕೇಶ್, ಅಜಯ್, ನಾಗರಾಜಪ್ಪ, ಶಿವಲಿಂಗ ಸ್ವಾಮಿ, ನಾಡಿಗ್ ಇದ್ದರು.