ಪರಶುರಾಂಪುರ: ತಾಲ್ಲೂಕಿನ ಗೋಸಿಕೆರೆ ಗ್ರಾಮದ ಕರೇತಿಪ್ಪೆಯ್ಯ ಹಾಗೂ ರಾಜಪ್ಪ ಅವರ ತೋಟದಲ್ಲಿ ಕಾಣಿಸಿಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸೆರೆ ಹಿಡಿದರು.
ಸೋಮವಾರ ನಸುಕಿನಲ್ಲೇ ಚಿಕ್ಕಚೆಲ್ಲೂರು ಗ್ರಾಮದ ರೈತರ ತೋಟವೊಂದರಲ್ಲಿ ಕಾಣಿಸಿಕೊಂಡ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಿದ ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಲೆಯ ಮೂಲಕ ಕರಡಿ ಮರಿಯನ್ನು ಸೆರೆ ಹಿಡಿದರು. ಇದರಿಂದ ಜನರಲ್ಲಿದ್ದ ಆತಂಕ ದೂರವಾಗಿದೆ.
ಜನರ ಗದ್ದಲದಿಂದ ನಿದ್ರೆಗೆ ಜಾರಿದ್ದ ಕರಡಿ ಎದ್ದು ದಿಕ್ಕಾಪಾಲಾಗಿ ಓಡುವಾಗ ಗೋಸಿಕೆರೆಯ ಕರೇತಿಪ್ಪಯ್ಯನ ತೋಟದ ಬಳಿ ಕರಡಿ ಸೆರೆ ಸಿಕ್ಕಿತು. ಕರಡಿಯನ್ನು ಸೆರೆಹಿಡಿದ ತಕ್ಷಣ ದೊಡ್ಡಬೀರನಹಳ್ಳಿ ಪಶುವೈದ್ಯ ಡಾ. ಶ್ರೀನಿವಾಸಬಾಬು, ವಲಯ ಅರಣ್ಯ ಇಲಾಖೆ ಅಧಿಕಾರಿ ಎಸ್. ಸುರೇಶ್ ಅವರು, ನಿತ್ರಾಣ ಸ್ಥಿತಿಯಲ್ಲಿದ್ದ ಕರಡಿಗೆ ಅರವಳಿಕೆ ಮದ್ದು ನೀಡುವ ಮೂಲಕ ಆರೋಗ್ಯ ತಪಾಸಣೆ ನಡೆಸಿದರು.
ನಂತರ ವಾಹನದಲ್ಲಿ ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಕೊಂಡೊಯ್ದರು. ಪರಶುರಾಂಪುರ ಉಪ ವಲಯ ಅರಣ್ಯಾಧಿಕಾರಿ ಎಸ್. ಬಾಬು, ಸಿಬ್ಬಂದಿ ಮಾರುತಿ, ರಾಜೇಶ, ಜಯಣ್ಣ, ಗ್ರಾಮಸ್ಥರಾದ ರಾಜಣ್ಣ, ತಿಪ್ಪೇಸ್ವಾಮಿ ಇದ್ದರು.