ನವದೆಹಲಿ: ಹಿರಿಯ ಆಫ್ಸ್ಪಿನ್ನರ್ ಆಶಿಶ್ ಕಪೂರ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೂನಿಯರ್ ತಂಡದ ಆಯ್ಕೆ ಸಮಿತಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ.
ಈ ಮೊದಲು ಸಮಿತಿಯ ಮುಖ್ಯಸ್ಥರಾಗಿದ್ದ ಕರ್ನಾಟಕದ ವೆಂಕಟೇಶ್ ಪ್ರಸಾದ್, ಶುಕ್ರವಾರ ರಾಜೀನಾಮೆ ನೀಡಿದ್ದರು. ಅವರು ಮುಂಬರುವ ಐಪಿಎಲ್ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಹೀಗಾಗಿ ಈ ಹುದ್ದೆ ತೊರೆದಿದ್ದರು.
ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಐದು ಸದಸ್ಯರ ಆಯ್ಕೆ ಸಮಿತಿಯಲ್ಲಿ ಆಶಿಶ್ ಕೂಡ ಇದ್ದರು. ಸಮಿತಿಯಲ್ಲಿ ಮೂರು ಮಂದಿ ಮಾತ್ರ ಇರಬೇಕು ಎಂದು ಲೋಧಾ ಸಮಿತಿ ಹೇಳಿತ್ತು. ಹೀಗಾಗಿ ಆಶಿಶ್ ಮತ್ತು ಪಂಜಾಬ್ನ ಅಮಿತ್ ಶರ್ಮಾ ಅವರನ್ನು ತೆಗೆದು ಹಾಕಲಾಗಿತ್ತು.
ಉತ್ತರ ಪ್ರದೇಶದ ಹಿರಿಯ ಆಲ್ರೌಂಡರ್ ಜ್ಞಾನೇಂದ್ರ ಪಾಂಡೆ ಮತ್ತು ಬರೋಡಾದ ಹಿರಿಯ ಆಟಗಾರ ರಾಕೇಶ್ ಪಾರಿಖ್ ಅವರು ಸದ್ಯ ಸಮಿತಿಯಲ್ಲಿದ್ದಾರೆ.