ಹೊಸದುರ್ಗ: ₹ 1 ಕೋಟಿ ವೆಚ್ಚದಲ್ಲಿ ಕನ್ನಡ ಮಾತೆ ಭುವನೇಶ್ವರಿ ದೇವಿ ಕಲ್ಲಿನ ರಥವನ್ನು ಶ್ರೀಮಠದಲ್ಲಿ ನಿರ್ಮಿಸಲಾಗುವುದು. ಭಗೀರಥ ಗುರುಪೀಠವನ್ನು ಪ್ರವಾಸಿ ತಾಣವಾಗಿ ರೂಪಿಸಲು ಸರ್ಕಾರ ಹಾಗೂ ಭಕ್ತರು ಹೆಚ್ಚಿನ ನೆರವು ನೀಡಬೇಕು ಎಂದು ಪುರುಷೋತ್ತಮಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.
ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಭಾನುವಾರ ನಡೆದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಬೆಳವಣಿಗೆ ಕಾರ್ಯಾಗಾರದ ಆರೋಗ್ಯ ಜಾಗೃತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಉತ್ತಮ ವ್ಯಕ್ತಿತ್ವದಿಂದ ಮಾತ್ರ ಸಮಾಜದಲ್ಲಿ ಗೌರವ ಸಂಪಾದಿಸಲು ಸಾಧ್ಯ. ನಮ್ಮಲ್ಲಿರುವ ಎಲ್ಲಾ ಭಾಗ್ಯ ಅನುಭವಿಸಲು ಆರೋಗ್ಯ ಭಾಗ್ಯ ಮುಖ್ಯ. ಹೃದಯ ರಕ್ಷಣೆಗಾಗಿ ಪ್ರತಿದಿನ ಒಂದು ಗಂಟೆ ನಡೆದಾಡಿದಲ್ಲಿ ಅದು ನೂರ್ಕಾಲ ಮಿಡಿಯುತ್ತದೆ. ಅನುಭಾವಿಗಳಿಂದ ಜ್ಞಾನ ಪಡೆದುಕೊಳ್ಳಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ರವೀಂದ್ರನಾಥ್, ‘ಹೃದಯ ರಕ್ಷಣೆಗೆ ದಿನಕ್ಕೆ ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಯೋಗ, ಧ್ಯಾನ, ಪ್ರಾಣಾಯಾಮ ಮಾಡು
ವುದರಿಂದ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬಹುದು. ಧೂಮಪಾನ, ಮದ್ಯಪಾನದಿಂದ ದೂರ ಇರಬೇಕು’ ಎಂದು ಸಲಹೆ ನೀಡಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ‘ಪುರುಷೋತ್ತಮಾನಂದಪುರಿ ಸ್ವಾಮೀಜಿಅವರ 53ನೇ ಜನ್ಮದಿನದ ಅಂಗವಾಗಿ ಎರಡು ದಿನ ವ್ಯಕ್ತಿತ್ವ ವಿಕಸನ ಹಾಗೂನಾಯಕತ್ವ ಬೆಳವಣಿಗೆ ಶಿಬಿರ ಏರ್ಪಡಿಸಿರುವುದು ಅವಿಸ್ಮರಣೀಯ. ಶ್ರೀಗಳು ಉಪ್ಪಾರ ಸಮಾಜದ ಸಂಘಟನೆ, ಅಭಿವೃದ್ಧಿ, ಸಮುದಾಯದ ರಕ್ಷಣೆ ಹಾಗೂ ರಾಜಕೀಯ ಶಕ್ತಿ ತುಂಬಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಉಪ್ಪಾರರು ಸ್ವಾಮೀಜಿ ಮಾರ್ಗದರ್ಶನದಲ್ಲಿ ಸದಾ ನಡೆದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.
ಶಾಶ್ವತ ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎನ್.ದ್ವಾರಕನಾಥ್, ‘ತಳಸಮುದಾಯಗಳು ಒಗ್ಗಟ್ಟಾಗಬೇಕು. ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧಿಕವಾಗಿ ಸಿಗಬೇಕು. ತಳಸಮುದಾಯಗಳು ಪಡೆದುಕೊಳ್ಳವುದಷ್ಟೇ ಅಲ್ಲ. ಇದರಿಂದ ಸಮುದಾಯದ ಬೆಳವಣಿಗೆ ಆಗಬೇಕು’ ಎಂದು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನದ ಮುಖ್ಯಸ್ಥ ಪ್ರೊ.ಕೆ.ಎಂ.ಮೈತ್ರಿ, ಡಾ.ಶಂಕರ್, ಸಿಐಡಿ ವಿಭಾಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿದರು.
ರಾಜ್ಯ ಉಪ್ಪಾರ ಯುವಕ ಸಂಘದ ಅಧ್ಯಕ್ಷ ವೆಂಕಟೇಶ್, ಉಪ್ಪಾರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಮಲ್ಲಿಕಾರ್ಜುನ್, ಉಪನ್ಯಾಸಕ ಕೆ.ಸುರೇಶ್, ತಿಪ್ಪೇಸ್ವಾಮಿ, ಯುಗಧರ್ಮ ರಾಮಣ್ಣ ಇದ್ದರು. ಪ್ರಾರ್ಥನೆ, ಯೋಗ, ವಚನ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.