ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬೆಲಗೂರು ಮಾರುತಿ ಪೀಠಾಧ್ಯಕ್ಷರಾದ ಬಿಂದು ಮಾಧವ ಶರ್ಮ (75) ಅವರು ಬೆಂಗಳೂರಿನಲ್ಲಿ ಶುಕ್ರವಾರ ವಿಧಿವಶರಾದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಿಗ್ಗೆ 9ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಮಠದ ಮೂಲಗಳು ಮಾಹಿತಿ ನೀಡಿವೆ. ಸ್ವಾಮೀಜಿ ನಿಧನದಿಂದ ಬೆಲಗೂರು ಮೌನಕ್ಕೆ ಶರಣಾಗಿದೆ.
ಮೂಲತಃ ಬೆಲಗೂರಿನ ಬಿಂದು ಮಾಧವ ಶರ್ಮ ಆಂಜನೇಯನ ಆರಾಧಕರು. ರಾಜ್ಯದ ಹಲವೆಡೆ ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಆಂಜನೇಯ ವಿಗ್ರಹ ಪ್ರತಿಷ್ಠಾಪನೆಗೆ ಇವರನ್ನು ಆಹ್ವಾನಿಸಲಾಗುತ್ತಿತ್ತು. ಪಾರ್ಥಿವ ಶರೀರವನ್ನು ಸಂಜೆ 4ಕ್ಕೆ ಬೆಲಗೂರಿಗೆ ತರಲಾಗುತ್ತಿದೆ. ಅಂತ್ಯಕ್ರಿಯೆ ಶನಿವಾರ ನಡೆಯುವ ಸಾಧ್ಯತೆ ಇದೆ.