ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಜೀನಾಮೆ ನೀಡುತ್ತಿರುವ ಯುವ ನಾಯಕರ ಸಿಟ್ಟು ಮುಸ್ಲಿಂ ಗೂಂಡಾ ವಿರುದ್ಧ ತಿರುಗಲಿ'

ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿಕೆ
Last Updated 28 ಜುಲೈ 2022, 10:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ಹತಾಶೆಗೊಂಡು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವ ಬಿಜೆಪಿ ಯುವ ನಾಯಕರ ಸಿಟ್ಟು, ಆಕ್ರೋಶ ಮುಸ್ಲಿಂ ಗೂಂಡಾಗಳ ವಿರುದ್ಧ ತಿರುಗಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿಕೆ ನೀಡಿದರು.

‘ಸೈದ್ದಾಂತಿಕ ವೈಷಮ್ಯಕ್ಕೆ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿರುವುದಕ್ಕೆ ಪಕ್ಷದ ನಾಯಕರು ಬೇಸರದಲ್ಲಿದ್ದಾರೆ. ನೋವಿನ ಸಂದರ್ಭದಲ್ಲಿ ಪಕ್ಷದ ವಿರುದ್ಧ ತಿರುಗಿಬೀಳುವುದು ಸರಿಯಲ್ಲ. ಪಕ್ಷವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಇಂತಹ ಕೊಲೆಗಳು ನಡೆಯುತ್ತಿವೆ. ಪಕ್ಷದ ಸಿದ್ಧಾಂತ, ವಿಚಾರಗಳಲ್ಲಿ ಪ್ರಬುದ್ಧತೆ ಹೊಂದದವರು ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಂಘಪರಿವಾರದ ಹಲವರ ಹತ್ಯೆಯಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡಿಮೆ ಸಂಖ್ಯೆಯ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕಾರ್ಯಕರ್ತರ ಕೊಲೆಗಳನ್ನು ತಡೆಯಲು ಸಾಧ್ಯವಾಗದಿರುವುದಕ್ಕೆ ಬೇಸರವಿದೆ. ಇನ್ನು ಮುಂದೆ ಒಬ್ಬ ಕಾರ್ಯಕರ್ತ ಕೂಡ ಹೀಗೆ ಬಲಿಯಾಗಬಾರದು. ಸೈದ್ಧಾಂತಿಕ ವೈಷಮ್ಯದ ಕೊಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮುಸ್ಲಿಂ ಗೂಂಡಾಗಳು ಹಾಳು ಮಾಡುತ್ತಿದ್ದಾರೆ. ಎಲ್ಲ ಮುಸ್ಲಿಮರೂ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಸಾರ್ವತ್ರಿಕವಾಗಿ ಹೇಳುವುದಿಲ್ಲ. ಕೆಲ ಮುಸ್ಲಿಂ ಗೂಂಡಾಗಳ ಮನಸ್ಥಿತಿ ಬದಲಾದಂತೆ ಕಾಣುತ್ತಿಲ್ಲ. ಮುಸ್ಲಿಂ ಸಮುದಾಯದ ಹಿರಿಯರು ಇಂಥವರಿಗೆ ಬುದ್ಧಿವಾದ ಹೇಳಬೇಕು. ಹಿಂದೂಗಳ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು. ಹಿಂದೂಗಳು ತಿರುಗಿಬಿದ್ದರೆ ರಕ್ತ ಹರಿಯುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ’
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದಕ್ಕೆ ಗೃಹ ಸಚಿವರನ್ನು ಹೊಣೆ ಮಾಡಲಾಗದು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟರು.

‘ಕಾನೂನು, ಸುವ್ಯವಸ್ಥೆ ಬಿಗಿಯಾಗಿದ್ದರೆ ಇಂತಹ ಕೊಲೆಯೇ ನಡೆಯುತ್ತಿರಲಿಲ್ಲ. ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರನ್ನು ಮುಟ್ಟಲು ಉತ್ತರಪ್ರದೇಶದಲ್ಲಿ ಹೆದರುತ್ತಾರೆ. ಹಿಂದೂ ಸಮಾಜದ ತಂಟೆಗೆ ಬಂದರೆ ಕುಟುಂಬವನ್ನು ಸರ್ವನಾಶ ಮಾಡಲಾಗುವುದು ಎಂಬ ಭಯ ಸೃಷ್ಟಿಸಬೇಕು. ಈ ಸಂಬಂಧ ಕಾನೂನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಷಾ ಅವರನ್ನು ಕೋರುತ್ತೇನೆ’ ಎಂದರು.

‘ಗೊಂದಲ ಸೃಷ್ಟಿಸಿದ ಕಾಂಗ್ರೆಸ್‌’
ಕೊಲೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಬಗ್ಗೆ ನೇರವಾಗಿ ಮಾತನಾಡದ ಕಾಂಗ್ರೆಸ್‌, ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಕೊಲೆ ಆರೋಪಿಗಳ ಧರ್ಮವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳುತ್ತಿಲ್ಲ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೊಲೆಗಡುಕರ ಪರವಾಗಿ ನಿಂತಿದ್ದವರು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.

‘ಚುನಾವಣೆಗೆ ಎಂಟು ತಿಂಗಳು ಇರುವಾಗಲೇ ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್‌ ನಾಯಕರು ಕಿತ್ತಾಡುತ್ತಿದ್ದಾರೆ. ಬ್ರೋಕರ್‌ ಜಮೀರ್‌ ಅವರನ್ನು ಬೆನ್ನಿಗೆ ಇಟ್ಟುಕೊಂಡ ಸಿದ್ದರಾಮಯ್ಯ ತಿರುಗಾಡುತ್ತಿದ್ದಾರೆ. ರಾಜಕಾರಣಕ್ಕೆ ಜಾತಿಯ ಲೇಪನ ಮಾಡಿದವರಿಗೆ ಸರ್ಕಾರವನ್ನು ಟೀಕಿಸುವ ಅರ್ಹತೆ ಇಲ್ಲ. ಭ್ರಷ್ಟಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್‌ ಉಳಿಸಿಕೊಂಡಿಲ್ಲ’ ಎಂದು ತಿರುಗೇಟು ನೀಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡ ಸಿದ್ದೇಶ್‌ ಯಾದವ್‌, ಮಲ್ಲಿಕಾರ್ಜುನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT