ಚಿತ್ರದುರ್ಗ: ಬುದ್ಧ ಪೂರ್ಣಿಮೆ ಪ್ರಯುಕ್ತ ಗೌತಮ ಬುದ್ಧ ಪ್ರತಿಷ್ಠಾನ, ಕೋಟೆನಾಡು ಬುದ್ಧವಿಹಾರದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಪ್ರತಿಮೆಯ ಮೆರವಣಿಗೆ ನಗರದಲ್ಲಿ ಭವ್ಯವಾಗಿ ನಡೆಯಿತು.
ಜಿಲ್ಲಾ ಕ್ರೀಡಾಂಗಣ ಮುಂಭಾಗದ ಗೌತಮ ಬುದ್ಧ ಪ್ರತಿಮೆಯ ಬಳಿಯಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಮನುಕುಲಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧನ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಮೌನವೀಯ ಮೌಲ್ಯಗಳನ್ನು ಕಾರ್ಯಗತಗೊಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ದ್ವೇಷ, ಅಸೂಯೆ, ಘರ್ಷಣೆ, ಯುದ್ದದಂತಹ ಜಾಗತಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬುದ್ಧನ ತತ್ವಗಳಲ್ಲಿ ಇವುಗಳಿಗೆ ಪರಿಹಾರವಿದೆ. ಬುದ್ಧ ಪ್ರತಿಮೆ ಇರುವ ಸ್ಥಳ ಹಾಗೂ ಮಾರ್ಗಕ್ಕೆ ಅವರದೇ ಹೆಸರು ಇಡಲಾಗುವುದು. ವೃತ್ತವನ್ನು ಇನ್ನಷ್ಟು ಅಂದಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.