ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ಸಂಭವಿಸಿದ ಅಗ್ನಿ ದುರಂತದಲ್ಲಿ ಆಹುತಿಯಾದ ಬಸ್ನಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರಿನ ಸುರೇಶ್ (34) ಎಂಬ ವ್ಯಕ್ತಿ ನಾಪತ್ತೆಯಾದವರು. ದುರಂತ ಸಂಭವಿಸಿದ ಬಳಿಕ ಇವರು ಕುಟುಂಬ ಹಾಗೂ ಪೊಲೀಸರ ಸಂಪರ್ಕಕ್ಕೆ ಬಂದಿಲ್ಲ. ಸುರೇಶ್ ಅವರ ಮೊಬೈಲ್ ಸಂಖ್ಯೆಯ ಕೊನೆಯ ಕರೆಯ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ನ ಹವಾನಿಯಂತ್ರವಲ್ಲದ ಸ್ಲೀಪರ್ ಕೋಚ್ ಬಸ್ ಆ.12ರಂದು ನಸುಕಿನ 4.15ಕ್ಕೆ ಬೆಂಕಿಗೆ ಆಹುತಿ ಆಗಿತ್ತು. ಬಸ್ನಲ್ಲಿದ್ದ ಇಬ್ಬರು ಚಾಲಕರು ಹಾಗೂ 29 ಪ್ರಯಾಣಿಕರಲ್ಲಿ ಐವರು ದಹನವಾಗಿದ್ದರು. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬದುಕುಳಿದ 24 ಪ್ರಯಾಣಿಕರಲ್ಲಿ 23 ಜನರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆದರೆ, ಸುರೇಶ್ ಮಾತ್ರ ಯಾರ ಸಂಪರ್ಕಕ್ಕೂ ಬಂದಿಲ್ಲ.
‘ಮದುವೆಯಾಗಲಿದ್ದ ಹುಡುಗಿಯೊಂದಿಗೆ ಸುರೇಶ್ ಆ.11ರಂದು ರಾತ್ರಿ 10ಕ್ಕೆ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ಆ ಬಳಿಕ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಭಸ್ಮವಾದ ಬಸ್ನಲ್ಲಿ ಮೊತ್ತೊಂದು ಮೃತದೇಹ ಇರಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.