ಚಿತ್ರದುರ್ಗ: ದೇಶದಲ್ಲಿ ‘ವಿಷನ್’ ಇಲ್ಲದ ‘ಟೆಲಿವಿಷನ್’ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ, ರಾಜ್ಯದಲ್ಲಿ ‘ಡಬಲ್ ಇಂಜಿನ್’ ಅಲ್ಲ ‘ಇಂಜಿನ್ ಇಲ್ಲದ’ ಬೋಗಿ ಸಾಗುತ್ತಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕುಟುಕಿದರು.
ನಗರದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕ ಶನಿವಾರ ಹಮ್ಮಿಕೊಂಡಿದ್ದ ‘ಬೆಲೆ ಏರಿಕೆ ವಿರುದ್ಧ ಯುವ ಆಕ್ರೋಶ’ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಬಿಜೆಪಿಗೆ ಯಾವುದೇ ‘ವಿಷನ್’ ಇಲ್ಲ. ಅವರಿಗೆ ಬೇಕಾಗಿರುವುದು ಪ್ರಚಾರ ಮಾತ್ರ. ಇವರು ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆ ಖಚಿತ ಎನ್ನುವಂತಾಗಿದೆ. ಅವರದು ‘ಬಿ’ ಪಕ್ಷ; ಅಂದರೆ ಬೆಲೆ ಏರಿಕೆ ಪಕ್ಷ’ ಎಂದು ಛೇಡಿಸಿದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನರೇ ಬಿಜೆಪಿ ನಾಯಕರನ್ನು ರಸ್ತೆಯಲ್ಲೇ ಹೊಡೆಯುವ ದಿನಗಳು ದೂರವಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಯುವ ಘಟಕದಿಂದ ಹಂತ ಹಂತವಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಕೊನೆ ಅಸ್ತ್ರವಾಗಿ ರಾಜ್ಯದ ಎಲ್ಲ ಸಂಸದರ ಮನೆಗಳಿಗೆ ಬೀಗ ಜಡಿದು ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.