ಚಳ್ಳಕೆರೆ: ದೇಶವನ್ನು ಮುನ್ನೆಡೆಸಬಲ್ಲ ಸರ್ವ ಸಾಮರ್ಥ್ಯ ಹೊಂದಿರುವ ನಾಯಕ ನರೇಂದ್ರ ಮೋದಿ. ಆದ ಕಾರಣ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಯನ್ನಾಗಿಲು ಭಾರತೀಯರೆಲ್ಲರೂ ಸಂಕಲ್ಪ ಮಾಡಬೇಕಾದ ಕಾಲ ಬಂದಿದೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಟೀಂ ಮೋದಿ ಕಾರ್ಯರ್ತಕರು ಆಯೋಜಿಸಿದ್ದ ‘ದೇಶಕ್ಕಾಗಿ ಮೋದಿ-ಮೋದಿಗಾಗಿ ನಾವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘2ಜಿ, 3ಜಿ ಸಿಗ್ನಲ್ ಲೂಟಿ ಮಾಡಿರುವುದಲ್ಲದೆ ಮಲ್ಯರಂತಹ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಸಾಲ ನೀಡಿ ಶ್ರೀಮಂತರನ್ನು ರಕ್ಷಣೆ ಮಾಡಿದೆ. ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು. ಭಾರತದ ರಕ್ಷಣೆ ನನ್ನ ಹೊಣೆ ಎಂದು ಅಂತರಂಗದಿಂದ ನುಡಿಯುವವರ ಕೈ ಅಧಿಕಾರ ಕೊಟ್ಟರೆ ದೇಶ ಹಾಗೂ ಜನರೂ ಸುರಕ್ಷಿತವಾಗಿರುತ್ತಾರೆ’ಎಂದರು.
ಭಾರತದ ಬಗ್ಗೆ ಸಾಮಾನ್ಯ ವಿವೇಚನಾ ಶಕ್ತಿ ಹೊಂದಿರದ ರಾಹುಲ್ ಗಾಂಧಿಯವರಿಗೆ ದೇಶವನ್ನು ಆಳುವ ಸಾಮರ್ಥ್ಯ ಇಲ್ಲ. 8 ಸ್ಥಾನ ಗೆದ್ದರೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಹಗಲುಗನಸು ಕಾಣುತ್ತಿದ್ದು ನಮ್ಮ ಸಂಸಾರ ಕರ್ನಾಟಕ ಸರ್ಕಾರ ಎನ್ನುವಂತಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣವನ್ನು ವ್ಯಂಗ್ಯಮಾಡಿದರು.
‘ರೈತರಿಗೆ ಜನಧನ್, ಜನಸಾಮಾನ್ಯರಿಗೆ ಆಯಷ್ಮಾನ್ ಮುಂತಾದ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಭಾರತದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿ ಡಿದಿರುವುದೇ ಮೋದಿಯವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮದಾಸ್, ಪಕ್ಷದ ಮುಖಂಡರಾದ ಎಂ.ಎನ್. ಜಯರಾಂ, ಪ್ರಸಾದ್, ಡಿ.ಎಂ. ತಿಪ್ಪೇಸ್ವಾಮಿ, ಭರತೇಶರೆಡ್ಡಿ, ಮಂಜುನಾಥ್, ವಾರಿಯರ್ಸ್ ಲೋಕನಾಥ್ , ಸತೀಶ್, ನಾಗರಾಜ ಇದ್ದರು.
* ಮೋದಿ ಆಡಳಿತದಿಂದ ಸೈನಿಕರಿಗೆ ಹುಮ್ಮಸ್ಸು ಬಂದಿದೆ. ದೇಶದ ಏಕತೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇಂತಹ ವ್ಯಕ್ತಿಯ ಕೈಬಲಪಡಿಸಲು ಮತ್ತೆ ಬಿಜೆಪಿಗೆ ಬೆಂಬಲ ನೀಡಬೇಕು. -ಲಿಂಗರಾಜು, ನಿವೃತ್ತ ಸೈನಿಕ