ಚಳ್ಳಕೆರೆ (ಚಿತ್ರದುರ್ಗ): ಇಲ್ಲಿನ ಗ್ರಾಮ ದೇವತೆ ಚಳ್ಳಕೇರಮ್ಮ ದೇವಾಲಯದಲ್ಲಿ ಮಂಗಳವಾರ ರಾತ್ರಿ ಕಳ್ಳರು ಎರಡು ಹುಂಡಿಗಳನ್ನು ಒಡೆದು ಹಣ ದೋಚಿದ್ದಾರೆ.
ನಗರದ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಚಳ್ಳಕೇರಮ್ಮ ದೇವಾಲಯವು ಬಳ್ಳಾರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 150ಎ ಗೆ ಹೊಂದಿಕೊಂಡಿದೆ. ಮಂಗಳವಾರ ರಾತ್ರಿ ದೇವಾಲಯದ ಪಕ್ಕದಲ್ಲಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸಿ ದೇವಾಲಯದ ಒಳನುಗ್ಗಿರುವ ಕಳ್ಳರು ದೇವಾಲಯದಲ್ಲಿದ್ದ ಎರಡು ಹುಂಡಿಗಳ ಬೀಗ ಮುರಿದಿದ್ದಾರೆ.
ದೇವಾಲಯದಲ್ಲಿ ಕಳ್ಳರು ಚಪ್ಪಲಿ ಕಾಲಲ್ಲೇ ಓಡಾಡಿರುವ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ದೇವಾಲಯದ ಹುಂಡಿಯನ್ನು ತೆರೆದಿರಲಿಲ್ಲ. ಹಾಗಾಗಿ ಕಳ್ಳರು ಅಪಾರ ಪ್ರಮಾಣದ ಹಣವನ್ನು ದೋಚಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಚಳ್ಳಕೇರಮ್ಮ ದೇವಾಲಯಕ್ಕೆ ಚಳ್ಳಕೆರೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ಭಕ್ತ ಸಮೂಹವಿದೆ. ಕಳ್ಳರು ಹುಂಡಿ ದೋಚುವ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ತಹಶಿಲ್ದಾರ್ ಎನ್.ರಘುಮೂರ್ತಿ, ಸಿಪಿಐ ಜಿ.ಎಸ್.ತಿಪ್ಪೇಸ್ವಾಮಿ, ಎಸ್ ಐ ಮಹೇಶ್ ಗೌಡ ಭೇಟಿನೀಡಿ ಪರಿಶೀಲಿಸಿದ್ದಾರೆ.