ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆಯಲ್ಲಿ ಈ ಬಾರಿ ತೊಗರಿ ಬಂಪರ್ ಬೆಳೆ

ಉತ್ತಮ ಆದಾಯದ ನಿರೀಕ್ಷೆಯಲ್ಲಿ ಬೆಳೆಗಾರರು
Last Updated 23 ಅಕ್ಟೋಬರ್ 2020, 2:02 IST
ಅಕ್ಷರ ಗಾತ್ರ

ಚಳ್ಳಕೆರೆ: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿದ್ದ ಮಳೆಯಿಂದ ತಾಲ್ಲೂಕಿನ ಎಲ್ಲೆಡೆ ಬಿತ್ತನೆಯಾಗಿರುವ ತೊಗರಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಇದರಿಂದಾಗಿ ಬೆಳೆಗಾರರು ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಬಿತ್ತನೆಯ ಆರಂಭದಿಂದಲೇ ಉತ್ತಮ ಮಳೆ ಬಂದ ಕಾರಣ ಶೇಂಗಾ, ಈರುಳ್ಳಿ ಬೆಳೆ ಚೆನ್ನಾಗಿ ಬಂದಿದ್ದವು. ಬೆಳೆ ಫಸಲಿಗೆ ಬಂದ ಸಂದರ್ಭದಲ್ಲಿ ಹೆಚ್ಚು ಮಳೆ ಸುರಿಯಿತು. ಇದರಿಂದ ತೇವಾಂಶ ಹೆಚ್ಚಳವಾಗಿ ಬೆಳೆ ಸಂಪೂರ್ಣ ವಿಫಲವಾಗಿದೆ.

ಆದರೆ, ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ತಾಲ್ಲೂಕಿನ ನಗರಂಗೆರೆ, ಸೋಮಗುದ್ದು, ಬಾಲೇನಹಳ್ಳಿ, ರಾಮಜೋಗಿಹಳ್ಳಿ, ರೆಡ್ಡಿಹಳ್ಳಿ, ಮೀರಾಸಾಬಿಹಳ್ಳಿ, ಭರಮಸಾಗರ, ಬುಡ್ನಹಟ್ಟಿ, ನೇರಲಗುಂಟೆ, ನನ್ನಿವಾಳ, ಕುರುಡಿಹಳ್ಳಿ ಮುಂತಾದ ಗ್ರಾಮದಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಉತ್ತಮವಾಗಿದ್ದು, ಗಿಡಗಳು 4-5 ಅಡಿ ಎತ್ತರ ಬೆಳೆದಿವೆ.

‘ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡಗಳು, ಹೂವು ಮತ್ತು ಕಾಯಿಗಳನ್ನು ಹೊತ್ತು ನಿಂತಿವೆ. ಹೂವಿನ ಹಳದಿಬಣ್ಣ ಇಡೀ ಬೆಳೆಯನ್ನು ಆವರಿಸಿಕೊಂಡಂತಿದೆ. ಹೊಲದಲ್ಲಿನ ಫಸಲು ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಶೇಂಗಾ, ಈರುಳ್ಳಿ ವಿಫಲವಾಯ್ತು. ಸದ್ಯಕ್ಕೆ ಈಗ ರೈತರನ್ನು ಕೈ ಹಿಡಿಯುವ ಬೆಳೆ ತೊಗರಿ ಮಾತ್ರ ಎಂಬಂತಾಗಿದೆ. ಬೆಳೆ ಚೆನ್ನಾಗಿ ಬಂದಿದೆ. ಇದರಿಂದ ಉತ್ತಮ ಆದಾಯ ನಿರೀಕ್ಷಿಸಲಾಗಿದೆ’ ಎನ್ನುತ್ತಾರೆ ರೈತ ವೀರಭದ್ರಪ್ಪ.

‘ಮಳೆಯಾಶ್ರಿತ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, 8,257 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಹೂವು ಕಟ್ಟುವ ಹಂತದಲ್ಲಿ ಇರುವ ತೊಗರಿ ಬೆಳೆಗೆ ಪ್ರತಿ ಲೀಟರ್ ನೀರಿಗೆ 0.5 ಎಂಎಲ್ ಪ್ಲಾನೋಫಕ್ಸ್ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಇದರಿಂದ ಹೂವು ಉದುರುವುದು ನಿಲ್ಲುತ್ತದೆ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್‍ಕುಮಾರ್ ರೈತರಿಗೆ ಸಲಹೆ ನೀಡಿದ್ದಾರೆ.

‘ಮೋಡ ಕವಿದ ವಾತಾವಾರಣ ಹಾಗೂ ಮಳೆ ಬರುವ ಮುನ್ಸೂಚನೆ ಇರುವುದರಿಂದ ಬೆಳೆಗೆ ಕಾಯಿಕೊರಕ ರೋಗ ಹರಡುವ ಸಾಧ್ಯತೆ ಇದೆ. ಕಾಯಿಕೊರಕ ರೋಗ ಕಂಡುಬಂದಲ್ಲಿ 2 ಎಂಎಲ್ ಕ್ಲೋರೋಪೈರಿಫಸ್ ಮತ್ತು ಎಮೋಮೆಕ್ಸೆಟ್ ಬೆಂಜೆಟ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT