ಚಳ್ಳಕೆರೆ: ತಾಲ್ಲೂಕಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ತಹಶೀಲ್ದಾರ್ ಎನ್. ರಘುಮೂರ್ತಿ ಅವರಿಗೆ ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನೌಕರರು ಅದ್ಧೂರಿಯ ಬೀಳ್ಕೊಡುಗೆ ನೀಡಿದರು.
ಎನ್. ರಘುಮೂರ್ತಿ ಅವರ ವರ್ಗಾವಣೆಗೆ ಜ.30ರಂದು ಸರ್ಕಾರ ಆದೇಶ ಹೊರಡಿಸಿದ್ದು, ಬಳ್ಳಾರಿಯ ರೆಹಮಾನ್ ಪಾಷಾ ಅವರು ಚಳ್ಳಕೆರೆಯ ತಹಶೀಲ್ದಾರ್ ಆಗಿ ಫೆ. 1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ವರ್ಗಾವಣೆಯಾಗಿರುವ ರಘುಮೂರ್ತಿ ಅವರಿಗೆ ಸರ್ಕಾರ ಇದುವರೆಗೆ ಯಾವುದೇ ಸ್ಥಳ ನಿಯುಕ್ತಿ ಗೊಳಿಸದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಪ್ರವೇಶ ಬಯಸಿ ಸ್ವಇಚ್ಛೆಯಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಒಂದೆರಡು ದಿನಗಳಲ್ಲಿ ರಾಜೀನಾಮೆ ಸ್ವೀಕೃತವಾಗಲಿದೆ ಎಂಬ ವದಂತಿ ಹಬ್ಬಿದೆ.
2023-24ರ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ ಅಥವಾ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ರಘುಮೂರ್ತಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡು ಎರಡೂ ಕ್ಷೇತ್ರಗಳಲ್ಲಿ 3-4 ಬಾರಿ ಪ್ರವಾಸ ಮಾಡಿದ್ದಾರೆ ಎಂಬ ಸುದ್ದಿಯೂ ಹರಡಿದೆ.
ಚಳ್ಳಕೆರೆಗೆ ತಹಶೀಲ್ದಾರ್ ಆಗಿ ಬಂದಾಗಿನಿಂದಲೂ ಹೆಚ್ಚು ಹೆಚ್ಚು ಜನರನ್ನು ಸೇರಿಸಿ, ಶಾಸಕರ ಜೊತೆಗೂಡಿ ಸಭೆ-ಸಮಾರಂಭಗಳನ್ನು ನಡೆಸುವ ಮೂಲಕ ಮಾಧ್ಯಮಗಳಲ್ಲಿ ಎನ್. ರಘುಮೂರ್ತಿ ಅವರು ಹೆಚ್ಚಿನ ಪ್ರಚಾರ ಪಡೆದಿದ್ದರು. ಆಶ್ರಯ ಯೋಜನೆ ನಿವೇಶನ, ಸರ್ಕಾರಿ ಗೋಮಾಳ ಹಾಗೂ ಸ್ಮಶಾನ ಜಾಗದ ಹಂಚಿಕೆ ವಿಷಯವಾಗಿ ಅವರ ಮೇಲೆ ಆರೋಪ ಬಂದಿತ್ತು. ಹೀಗಾಗಿ ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ. ರಘುಮೂರ್ತಿ ಹಾಗೂ ತಹಶೀಲ್ದಾರ್ ಎನ್. ರಘುಮೂರ್ತಿ ನಡುವೆ ಒಂದೆರಡು ಬಾರಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ತಹಶೀಲ್ದಾರ್ ರಘುಮೂರ್ತಿ ಅವರು ಸಭೆಯಿಂದ ಹೊರ ನಡೆದ ಘಟನೆ ನಡೆದಿತ್ತು.
ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರೇಡ್-2 ತಹಶೀಲ್ದಾರ್ ಸಂಧ್ಯಾ, ಕಂದಾಯ ಅಧಿಕಾರಿ ನಿಂಗೇಗೌಡ, ಪ್ರಕಾಶ್, ಬೋರಯ್ಯ, ಗುತ್ತಿಗೆದಾರ ರಮೇಶ್, ನಗರಂಗೆರೆ ಬಾಬು, ನ್ಯಾಯಬೆಲೆ ಅಂಗಡಿ ಮಾಲೀಕ ಶ್ರೀನಿವಾಸ್, ನಾಗೇಂದ್ರಪ್ಪ ಇದ್ದರು.