ಚಿತ್ರದುರ್ಗ: ಇಲ್ಲಿನ ಕೆಳಗೋಟೆಯ ಸಿ.ಕೆ. ಪುರದ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗದಲ್ಲಿ ಭಾನುವಾರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ದಾಸಯ್ಯನವರು ಗಂಟೆ, ಜಾಗಟೆ, ಶಂಖ ಮೊಳಗಿಸಿದರು.
ಭವ್ಯ ರಥವನ್ನು ನೂರಾರು ಭಕ್ತರು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ದೇಗುಲದಿಂದ ಆರಂಭವಾದ ರಥೋತ್ಸವ ಕೆಳಗೋಟೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಾ ದೇಗುಲ ತಲುಪಿತು. ಇದೇ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಿ.ಕೆ. ಪುರ ಬಡಾವಣೆ, ಕೆಳಗೋಟೆ, ಆಕಾಶವಾಣಿ ಸುತ್ತಲಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಚನ್ನಕೇಶವ ಸ್ವಾಮಿಯ ಕಲ್ಯಾಣೋತ್ಸವವೂ ಅದ್ದೂರಿಯಾಗಿ ನಡೆಯಿತು.