ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಸಮೀಪ ಕೆಲ ದಿನಗಳ ಹಿಂದೆ ಗಣಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ₹ 20 ಲಕ್ಷದಂತೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ಪ್ರವಾಸಿ ಮಂದಿರದಲ್ಲಿ ಗುರುವಾರ ಚೆಕ್ ವಿತರಿಸಿದರು.
ಲಾರಿ ಡಿಕ್ಕಿ ಹೊಡೆದು ಭೀಮಸಮುದ್ರ ಲಂಬಾಣಿ ಹಟ್ಟಿಯ ನಿವಾಸಿ ಮಹಾಂತೇಶ್, ಪತ್ನಿ ದೀಪಾ, ಸಹೋದರನ ಪುತ್ರ ಚೇತನ್ ಮೃತಪಟ್ಟಿದ್ದರು. ಪರಿಹಾರವಾಗಿ ಕುಟುಂಬದವರಿಗೆ ವೇದಾಂತ-ಸೇಸಾ ಗೋವಾ ಕಬ್ಬಿಣ ಅದಿರು ಕಂಪನಿ ₹ 80 ಲಕ್ಷ ನೀಡಲು ಒಪ್ಪಿಗೆ ಸೂಚಿಸಿತ್ತು.
ಅದರಂತೆ ಮೃತಪಟ್ಟ ಮೂವರ ಪರವಾಗಿ ಬಂದಿದ್ದ ಕುಟುಂಬಸ್ಥರಿಗೆ ತಲಾ ₹ 20 ಲಕ್ಷದಂತೆ ಒಟ್ಟು ₹ 60 ಲಕ್ಷ ವಿತರಿಸಲಾಯಿತು. ಮತ್ತೊಬ್ಬರು ಕಾರಣಾಂತರದಿಂದ ಬಂದಿರದ ಕಾರಣ ಅವರಿಗೆ ಸಲ್ಲಬೇಕಾದ ₹ 20 ಲಕ್ಷದ ಚೆಕ್ ಅನ್ನು ಮತ್ತೊಂದು ದಿನ ಗಣಿ ಕಂಪನಿಯವರು ಅಥವಾ ಶಾಸಕರ ಸಮ್ಮುಖದಲ್ಲಿ ವಿತರಿಸಲು ತೀರ್ಮಾನಿಸಲಾಯಿತು.