ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನವೀರ ಕಣವಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ ಪ್ರದಾನ

Last Updated 21 ಫೆಬ್ರುವರಿ 2018, 9:38 IST
ಅಕ್ಷರ ಗಾತ್ರ

ಧಾರವಾಡ: ಎಸ್‌.ಬಂಗಾರಪ್ಪ ಪ್ರತಿಷ್ಠಾನ ಹಾಗೂ ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಅವರಿಗೆ ‘ಸಾಹಿತ್ಯ ಬಂಗಾರ’ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಟ್ರಸ್ಟ್‌ನ ಅಧ್ಯಕ್ಷ ಮಧು ಬಂಗಾರಪ್ಪ, ವೇದಿಕೆಯ ವೇಣುಗೋಪಾಲ ಅವರು, ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹1ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ದಿವಂಗತ ಎಸ್‌.ಬಂಗಾರಪ್ಪ ಅವರ 85ನೇ ಜನ್ಮ ದಿನ ಅಂಗವಾಗಿ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಡಾ. ಕಣವಿ ಅವರು ಆರೋಗ್ಯ ಸಮಸ್ಯೆಯಿಂದ ಹೋಗಿರಲಿಲ್ಲ. ಹೀಗಾಗಿ, ಮಂಗಳವಾರ ಇಲ್ಲಿನ ನಿಸರ್ಗ ಬಡಾವಣೆಯಲ್ಲಿರುವ ಅವರ ಪುತ್ರನ ಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಣವಿ, ‘2017 ನನ್ನ ಜೀವನದ ಅತ್ಯಂತ ಪ್ರಮುಖವಾದ ವರ್ಷ. ಒಂದೇ ವರ್ಷದಲ್ಲಿ ಸಿದ್ಧಲಿಂಗಶ್ರೀ ಹಾಗೂ ಸಾಹಿತ್ಯ ಬಂಗಾರ ಎಂಬ ಎರಡು ಪ್ರಮುಖ ಪ್ರಶಸ್ತಿಗಳು ಲಭಿಸಿವೆ’ ಎಂದರು.

‘ಸಾಮಾನ್ಯ ಜನರಲ್ಲಿ ಬೆರೆಯುವ ಗುಣ ಬಂಗಾರಪ್ಪ ಅವರಲ್ಲಿತ್ತು. ಕಾದಂಬರಿಕಾರ ಸುದರ್ಶನ ದೇಸಾಯಿ ಅವರ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದಲ್ಲಿ ಬಂಗಾರಪ್ಪ ಅವರನ್ನು ಭೇಟಿ ಮಾಡಿದ್ದೆ. ಜನರೊಂದಿಗೆ ಬೆರೆತು ಡೊಳ್ಳು ಬಾರಿಸುತ್ತಿದ್ದರು.

ಸಂಗೀತದ ಅಪಾರ ಅಭಿಮಾನಿಯಾಗಿದ್ದ ಅವರು, ಪುಣ್ಯಾಶ್ರಮದ ಸಂಗೀತ ಶಾಲೆಗೆ ಸಂಗೀತ ಸಾಧನಗಳನ್ನು ಕೊಡಿಸಿದ್ದು ಇನ್ನೂ ನೆನಪಿದೆ’ ಎಂದು ಸ್ಮರಿಸಿಕೊಂಡರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್.ಕೋನರಡ್ಡಿ, ರಂಗಕರ್ಮಿ ನಾಗರಾಜಮೂರ್ತಿ, ಬಸಲಿಂಗಯ್ಯ ಹಿರೇಮಠ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT