ಚಿತ್ರದುರ್ಗ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಮೌನಕ್ಕೆ ಜಾರಿದ್ದಾರೆ. ಮಠದ ಸುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಎಂದಿನಂತೆ ಬುಧವಾರ ಮುಂಜಾನೆ ವಾಯುವಿಹಾರ ಮುಗಿಸಿದ ಶರಣರು, ಪೂಜಾ ಕೈಂಕರ್ಯ ಮುಗಿಸಿ ಕೊಠಡಿಗೆ ತೆರಳಿದರು. ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಆವರಣಕ್ಕೆ ಪ್ರವೇಶ ಕಲ್ಪಿಸುತ್ತಿದ್ದಾರೆ.
ಬೆಳಗ್ಗೆಯಿಂದ ನೀರವ ಮೌನ ಆವರಿಸಿದ್ದ ಮಠದಲ್ಲಿ ಬೆಳಿಗ್ಗೆ 11.45 ರ ವೇಳೆಗೆ ಜೆಡಿಎಸ್ ಮುಖಂಡ ವೀರೇಂದ್ರ ಪಪ್ಪಿ, ಬಿಜೆಪಿ ಮುಖಂಡ ಅನಿತ್ ಕುಮಾರ್ ಬರುತ್ತಿದ್ದಂತೆ ಭಕ್ತರು ಪ್ರತ್ಯಕ್ಷರಾದರು.
ಗಣಪತಿ ಹಬ್ಬದ ಅಂಗವಾಗಿ ಸಾರ್ವಜನಿಕರು ಮಠಕ್ಕೆ ಭೇಟಿ ನೀಡಿ ಮುರುಘಾ ವನದಲ್ಲಿ ಸುತ್ತಾಡಿದರು. ಸಿಪಿಐ ಬಾಲಚಂದ್ರ ನಾಯ್ಕ್ ಭದ್ರತೆ ಪರಿಶೀಲಿಸಿದರು.