ಚಿತ್ರದುರ್ಗ: ಕೊರೊನಾ ವೈರಸ್ ಉಲ್ಬಣವಾಗುವುದನ್ನು ತಡೆಯಲು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಹಾಗೂ ಪೊಲೀಸ್ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ‘ಸೋಂಕು ನಿವಾರಕ ದ್ರಾವಣ’ವನ್ನು ಭಾನುವಾರ ಸಿಂಪಡಿಸಿದರು.
ರಾಜ್ಯದ ಒಬ್ಬ ಪೊಲೀಸ್ಗೆ ‘ಕೋವಿಡ್-19’ ದೃಢಪಟ್ಟಿರುವ ಬೆನ್ನಲ್ಲೇ ರಾಧಿಕಾ ಅವರು ಮುಂಜಾಗ್ರತಾ ಕ್ರಮವಾಗಿ ಠಾಣೆಗಳಿಗೆ ಭೇಟಿ ನೀಡಿ, ಸೋಂಕು ನಿವಾರಕ ದ್ರಾವಣ ಸಿಂಪಡಣೆಗೆ ಚಾಲನೆ ನೀಡಿದರು.
‘ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಭರದಲ್ಲಿ ವೈಯಕ್ತಿಕ ರಕ್ಷಣೆ ಮರೆಯುವ ಸಾಧ್ಯತೆ ಹೆಚ್ಚು. ಇದರಿಂದ ಅವರ ಕುಟುಂಬಕ್ಕೂ ತೊಂದರೆ ಆಗಬಹುದು. ಅದಕ್ಕಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಮುಂದಾಗಿದ್ದೇವೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿನ ಎಲ್ಲಾ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಕ್ವಾಟ್ರಸ್ಗಳಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಸೂಚನೆ ನೀಡಿದ್ದೇನೆ. ಕರ್ತವ್ಯದ ಜತೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು’ ಎಂದು ಸೂಚನೆ ನೀಡಿದ್ದಾರೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ, ತಿಪ್ಪೇಸ್ವಾಮಿ, ಸಿಪಿಐಗಳಾದ ಗಿರೀಶ್, ಲೋಕೇಶ್ ಇದ್ದರು.