ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರಲ್ಲಿ ಗುರುವಾರ ಕಂತೆ–ಕಂತೆ ಹಣ ಪತ್ತೆಯಾಗಿದೆ. ಜಾಲಿಗಿಡದ ಪೊದಯ ಸಮೀಪ ₹ 50, ₹ 100 ಹಾಗೂ ₹ 2 ಸಾವಿರ ಮುಖಬೆಲೆಯ ಹಣ ಸಿಕ್ಕಿದೆ.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಕೂಡ ಸಮೀಪದಲ್ಲೇ ಇದೆ. ಕೆಲ ದಿನಗಳ ಹಿಂದೆ ಇದೇ ಕಚೇರಿಯಲ್ಲಿ ₹ 36 ಲಕ್ಷ ಹಣ ಕಳವಾಗಿತ್ತು. ಬ್ಯಾಂಕಿನಿಂದ ಬಿಡಿಸಿಕೊಂಡು ತಂದಿದ್ದ ಹಣವನ್ನು ಚಾವಣಿ ಮುರಿದು ಕಳವು ಮಾಡಲಾಗಿತ್ತು.
ಪೊದೆಯ ಸಮೀಪ ಹಣ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಧಾವಿಸಿದ ಸಿಪಿಐ ಮಂಜುನಾಥ್ ಹಾಗೂ ಎಸ್ಐ ಸತೀಶನಾಯ್ಕ್ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ದಿಲೀಪ್ ಬ್ಯುಲ್ಡ್ ಕಂಪನಿಯಲ್ಲಿ ಕಳವಾಗಿದ್ದ ಹಣವನ್ನು ಬಿಸಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಕ್ಕಿರುವ ಹಣ ಎಷ್ಟಿದೆ ಎಂಬುದನ್ನು ಪೊಲೀಸರು ಲೆಕ್ಕಾ ಹಾಕುತ್ತಿದ್ದಾರೆ.