ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ಕೋಟೆನಾಡು ಸಂಪೂರ್ಣ ಸ್ತಬ್ಧ

* ಬೆಳಿಗ್ಗೆ ತರಕಾರಿ ಖರೀದಿಸಲು ಮಾರುಕಟ್ಟೆ ಬಳಿ ಮಾತ್ರ ಕಂಡು ಬಂದ ಜನ * ನೀರವಮೌನಕ್ಕೆ ಶರಣಾದ ರಸ್ತೆಗಳು
Last Updated 24 ಮೇ 2020, 13:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಸದಾ ಗಿಜಿಗುಡುತ್ತಿದ್ದ ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೊ ಎನ್ನುವ ವಾತಾವರಣ. ಜನಸಂಚಾರವೇ ಇಲ್ಲದ ಮುಖ್ಯ ರಸ್ತೆಗಳಲ್ಲಿ ಬಾಗಿಲು ಮುಚ್ಚಿದ ಅಂಗಡಿ. ಬಸ್‌ ನಿಲ್ದಾಣ ಖಾಲಿ ಖಾಲಿ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಚರಿಸದ ವಾಹನ.

ಇವು ಚಿತ್ರದುರ್ಗ ಜಿಲ್ಲೆಯಾದ್ಯಂತ ಕಂಡ ದೃಶ್ಯಗಳು. ರಜೆ ದಿನದಲ್ಲಿ ಜನಸಂಚಾರ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಭಾನುವಾರದ ಲಾಕ್‌ಡೌನ್‌’ಗೆ ಕೋಟೆನಾಡು ಸಂಪೂರ್ಣ ಸ್ತಬ್ಧವಾಗಿತ್ತು.

ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸದ ಅಂಗಡಿ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಬೆಳಿಗ್ಗೆ 9ರೊಳಗೆ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು. ಶನಿವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 7ರ ವರೆಗಿನ 36 ಗಂಟೆಗಳ ‘ಲಾಕ್‌ಡೌನ್’‌ಗೆ ಜನತೆ ಬೆಂಬಲಿಸುವ ಮೂಲಕ ಮನೆಯಲ್ಲಿಯೇ ಉಳಿದರು.ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ ಪರಿಸ್ಥಿತಿ ಇತ್ತು.

ಬಿಕೊ ಎನ್ನುತ್ತಿದ್ದ ರಸ್ತೆಗಳು: ಸದಾ ಜನದಟ್ಟಣೆ ಮತ್ತು ವಾಹನ ಸಂಚಾರದಿಂದ ಕೂಡಿರುತ್ತಿದ್ದ ಮುಖ್ಯ ರಸ್ತೆಗಳೆಲ್ಲವೂ ಬಿಕೊ ಎನ್ನುತ್ತಿದ್ದವು. ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಸಂತೆಹೊಂಡದ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆ, ಜಿಲ್ಲಾಧಿಕಾರಿ ವೃತ್ತ, ಗಾಂಧಿ ವೃತ್ತ, ಕನಕ ವೃತ್ತ, ತುರುವನೂರು ರಸ್ತೆ, ದಾವಣಗೆರೆ ರಸ್ತೆಯಲ್ಲಿ ಜನಸಂಚಾರವೇ ಕಾಣಲಿಲ್ಲ. ಜಿಲ್ಲೆಯ ರಸ್ತೆಗಳು ನೀರವ ಮೌನಕ್ಕೆ ಶರಣಾದಂತೆ ಭಾಸವಾಯಿತು.

ಜಿಲ್ಲೆಯಲ್ಲಿ ಬಹುತೇಕ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಯಾವೊಬ್ಬರು ಅಂಗಡಿಯನ್ನು ತೆರೆಯುವ ಪ್ರಯತ್ನ ಮಾಡಲಿಲ್ಲ. ನಸುಕಿನಿಂದ ಬೆಳಿಗ್ಗೆ 9ರ ವರೆಗೂ ತೆರೆದಿದ್ದ ತರಕಾರಿ ಮಾರುಕಟ್ಟೆಗಳ ಬಳಿ ವ್ಯಾಪಾರ ಚಟುವಟಿಕೆ ನಡೆಯಿತು. ಆದರೆ, ಹೆಚ್ಚು ದಾಸ್ತಾನು ಬಂದಿದ್ದ ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಮೈದಾನದ ತರಕಾರಿ ಮಾರುಕಟ್ಟೆ ಬಳಿ ಎಂದಿನಂತೆ ಜನದಟ್ಟಣೆ ಕಾಣಲಿಲ್ಲ. ಜೋಗಿಮಟ್ಟಿ ರಸ್ತೆ, ಫಿಲ್ಟರ್‌ ಹೌಸ್ ರಸ್ತೆ, ಕೆಳಗೋಟೆ, ಮುನ್ಸಿಪಲ್ ಕಾಲೊನಿ ಸೇರಿ ಕೆಲ ಬಡಾವಣೆಗಳಲ್ಲಿ ದಿನಸಿ ಮಳಿಗೆಗಳು ಮಾತ್ರ ತೆರೆದಿದ್ದವು. ಉಳಿದಂತೆ ಇಡೀ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಜಿಲ್ಲೆಯ ಬಹುತೇಕ ಭಾಗಗಳಲ್ಲಿರುವ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಹಾಲು ಮಾರಾಟಕ್ಕೆ ಅವಕಾಶ ಇದ್ದಿದ್ದರಿಂದ ನಂದಿನಿ ಹಾಲಿನ ಕೇಂದ್ರಗಳು ಮಾತ್ರ ತೆರೆದಿದ್ದವು. ಅನೇಕರು ಈ ಕೇಂದ್ರಗಳಿಗೆ ಧಾವಿಸಿ ಹಾಲು ಖರೀದಿಸಿದರು.

ಮಾರುಕಟ್ಟೆ, ಹೆದ್ದಾರಿ ಭಣ–ಭಣ: ಭಾನುವಾರ ಮಾತ್ರ ಬಹುತೇಕ ಮಳಿಗೆಗಳು ಬಾಗಿಲು ತೆರೆಯಲಿಲ್ಲ. ಲಾಕ್‌ಡೌನ್‌ ಕಾರಣಕ್ಕೆ ರೈತರು ಮಾರುಕಟ್ಟೆಗೆ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಲಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನ ಸಂಚಾರ ವಿರಳವಾಗಿತ್ತು. ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಪ್ಲಾಜಾ ವಾಹನಗಳಿಲ್ಲದೇ ಭಣ-ಭಣ ಎನ್ನುತ್ತಿತ್ತು. ನಗರದ ಹೊರವಲಯದಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT