ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವ ಅವಕಾಶ ಪಡೆದಿರುವ ಮೊದಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾಗಿದ್ದಾರೆ ಎನ್ನುವ ಚರ್ಚೆಗಳೂ ನಡೆದಿವೆ. ಬೊಮ್ಮಾಯಿಯವರು 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅದರಿಂದಾಗಿ ಭದ್ರಾ ಜಲಾಶಯದಿಂದ ತಾತ್ಕಾಲಿಕ ಮಾರ್ಗದಲ್ಲಿ 16 ಟಿಎಂಸಿ ಅಡಿ ನೀರು ವಾಣಿವಿಲಾಸಕ್ಕೆ ಹರಿದು ಬಂದಿದೆ. ಆಗ ತಾತ್ಕಾಲಿಕವಾಗಿ ಮೀಸಲಿಟ್ಟಿದ್ದ 5 ಟಿಎಂಸಿ ಅಡಿ ನೀರನ್ನು 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2 ಟಿಎಂಸಿ ಅಡಿಗೆ ಇಳಿಸುವ ಮೂಲಕ ತಾಲ್ಲೂಕಿನ ಜನರಿಗೆ ಅನ್ಯಾಯ ಎಸಗಿದ್ದು, 5 ಟಿಎಂಸಿ ಅಡಿ ನೀರಿನ ಶಾಶ್ವತ ಆದೇಶ ಮಾಡುವ ಮೂಲಕ ಸರಿಪಡಿಸಬೇಕು ಎಂಬುದು ತಾಲ್ಲೂಕಿನ ಜನರ ಪ್ರಮುಖ ಬೇಡಿಕೆಯಾಗಿದೆ.